ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ 9 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇದೇ ಪಂದ್ಯದಲ್ಲಿ ಟೀಮ ಇಂಡಿಯಾದ ಆಟಗಾರ ಶ್ರೇಯಸ್ ಅಯ್ಯರ್ ಗಾಯಕ್ಕೆ ತುತ್ತಾಗಿದ್ದರು.
ಹರ್ಷಿತ್ ರಾಣಾ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ನೀಡಿದ ಕ್ಯಾಚ್ನ್ನು ಶ್ರೇಯಸ್ ಅಯ್ಯರ್ ಪಡೆಯುವಲ್ಲಿ ವಿಫಲರಾಗಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ಅವರು ಗಂಭೀರ್ ಗಾಯಕ್ಕೆ ತುತ್ತಾಗಿದ್ದರು. ತಕ್ಷಣವೇ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಇದೇ ವೇಳೆ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗಿತ್ತು. ಈ ವೇಳೆ ಪಕ್ಕೆಲುಬುಗಳಲ್ಲಿ ರಕ್ತ ಸ್ರಾವ ಆಗಿರುವುದು ತಿಳಿದು ಬಂದಿದೆ. ಬಳಿಕ ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಅಯ್ಯರ್ ಅವರ ಗಾಯದ ಕುರಿತು ಬಿಸಿಸಿಐ ಈಗ ಎರಡನೇ ವೈದ್ಯಕೀಯ ನವೀಕರಣವನ್ನು ಬಿಡುಗಡೆ ಮಾಡಿದೆ.

ಶ್ರೇಯಸ್ ಅಯ್ಯರ್ ಅವರ ಗಾಯದ ಕುರಿತು ಬಿಸಿಸಿಐ ಮತ್ತೊಂದು ಅಪ್ಡೇಟ್ ನೀಡಿದೆ. ಅಯ್ಯರ್ ಅವರ ಸ್ಥಿತಿ ಈಗ ಸ್ಥಿರವಾಗಿದೆ ಮತ್ತು ಅವರು ವೀಕ್ಷಣೆಯಲ್ಲಿದ್ದಾರೆ ಎಂದು ದೇವಜಿತ್ ಸೈಕಿಯಾ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಂಗಳವಾರ ಅಕ್ಟೋಬರ್ 28 ರಂದು ನಡೆದ ಎರಡನೇ ಸ್ಕ್ಯಾನ್ನಲ್ಲಿ ಶ್ರೇಯಸ್ ಅಯ್ಯರ್ ಗಮನಾರ್ಹ ಸುಧಾರಣೆ ತೋರಿಸಿದ್ದಾರೆ. ಇವರ ಆರೋಗ್ಯದ ಮೇಲೆ ಬಿಸಿಸಿಐ ವೈದ್ಯಕೀಯ ತಂಡವು ಗಮನ ಹರಿಸುತ್ತಿದೆ. ಈ ಬಗ್ಗೆ ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸುತ್ತಿದೆ ಎಂದು ತಿಳಿದು ಬಂದಿದೆ.
ಕ್ರಿಕ್ಬಜ್ ವರದಿಯ ಪ್ರಕಾರ, ಸಿಡ್ನಿಯಲ್ಲಿ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಶಸ್ತ್ರ ಚಿಕಿತ್ಸೆ ಅವರ ಗಾಯಕ್ಕೆ ಅಗತ್ಯವಾಗಿತ್ತು. ಸದ್ಯ ಅವರನ್ನು ಐಸಿಯುನಿಂದ ಬಿಡುಗೊಡೆಗೊಳಿಸಲಾಗಿದ್ದು, ಮುಂದಿನ ವಾರದೊಳಗೆ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ತಿಳಿದು ಬಂದಿದೆ. ಇವರ ಮೇಲ್ವಿಚಾರಣೆಗೆ ಬಿಸಿಸಿಐ ಡಾ.ರಿಜ್ವಾನ್ ಅವರನ್ನು ನೇಮಿಸಿದೆ. ಇನ್ನು ಬಿಸಿಸಿಐ ಅವರ ಕುಟುಂಬವನ್ನು ಸಿಡ್ನಿಗೆ ಕಳುಹಿಸಲು ಸಿದ್ಧತೆ ನಡೆಸಲಾಗುವುದು. ಸಿಡ್ನಿಯಲ್ಲಿ ಶ್ರೇಯಸ್ ಅಯ್ಯರ್ ಆಪ್ತ ಸ್ನೇಹಿತರ ಮನೆಯಿಂದ ಆಹಾರವನ್ನು ಸೇವಿಸುತ್ತಿದ್ದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.