ಬಲ ಮೊಣಕಾಲಿನ ಊತದಿಂದಾಗಿ ನಾಗ್ಪುರದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಿಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ, ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಗೆ ಪ್ಲೇಯಿಂಗ್-11 ರಲ್ಲಿ ಅವಕಾಶ ನೀಡಲಾಗಿತ್ತು. ಅಯ್ಯರ್ 36 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ ಭರ್ಜರಿ ಅರ್ಧಶತಕವನ್ನು ಬಾರಿಸಿದ್ದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತದ 4 ವಿಕೆಟ್ಗಳ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿರಾಟ್ ಕೊಹ್ಲಿ ಅವರ ಮೊಣಕಾಲಿನ ಊತ ಈಗ ಗುಣಮುಖವಾಗಿದ್ದು, ಫೆಬ್ರವರಿ 9 ರಂದು ಕಟಕ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್-11 ರಿಂದ ಹೊರಗುಳಿಯುವ ಸಾಧ್ಯತೆ ಇದೆ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ 6 ಏಕದಿನ ಇನ್ನಿಂಗ್ಸ್ಗಳಲ್ಲಿ 91 ರ ಸರಾಸರಿಯಲ್ಲಿ ಒಟ್ಟು 455 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 2 ಶತಕಗಳು ಮತ್ತು 3 ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಇದರ ಹೊರತಾಗಿಯೂ ಪ್ಲೇಯಿಂಗ್-11 ರಲ್ಲಿ ಅವರ ಸ್ಥಾನ ಫಿಕ್ಸ್ ಆಗಿಲ್ಲ. ಇದೀಗ ಶ್ರೇಯಸ್ ಅಯ್ಯರ್ ಅವರಿಗೆ ಬೆಂಬಲವಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ.
ಭಾರತ ಏಕದಿನ ತಂಡದ ಪ್ಲೇಯಿಂಗ್-11 ರಲ್ಲಿ ಶ್ರೇಯಸ್ ಅಯ್ಯರ್ ಖಚಿತ ಸ್ಥಾನಕ್ಕೆ ಅರ್ಹರು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಿಂದ ಹೊರಬಂದರೆ, ಅವರು ಇತರ ಯಾವುದೇ ಆಟಗಾರನಿಗಿಂತ ಉತ್ತಮರು. ಹಾಗಾಗಿ ಅವರು ಭಾರತ ತಂಡಕ್ಕೆ ಮರಳಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಸ್ಪಿನ್ ಬೌಲಿಂಗ್ ವಿರುದ್ಧ ಅವರು ಎಷ್ಟು ಉತ್ತಮ ಹಿಟ್ಟರ್ ಎಂದು ನಮಗೆ ತಿಳಿದಿದೆ ಎಂದು ರಿಕಿ ಪಾಂಟಿಂಗ್ ಬೆಂಬಲಕ್ಕೆ ನಿಂತಿದ್ದಾರೆ.
ಶ್ರೇಯಸ್ ಅಯ್ಯರ್ ಕಳೆದ ಕೆಲವು ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವುದು ನನಗೆ ಸ್ವಲ್ಪ ಆಶ್ಚರ್ಯ ತಂದಿದೆ. ಅವರು ಏಕದಿನ ವಿಶ್ವಕಪ್ನಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರು ಆ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದ್ದಾರೆ. ಅದನ್ನು ತಮ್ಮದೇ ಆದಂತೆ ಮಾಡಿಕೊಂಡಿದ್ದಾರೆ ಎಂದು ನನಗೆ ಆಗ ಅನಿಸಿತು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಆಯ್ಕೆಗಳಿವೆ. ತಂಡದ ಸಂಯೋಜನೆಯಲ್ಲಿ, ಅವರಲ್ಲಿ ಕೇವಲ 3 ಜನರು ಮಾತ್ರ ಪ್ಲೇಯಿಂಗ್-11 ರ ಭಾಗವಾಗಬಹುದು. ಇಂತಹ ಸಂದರ್ಭದಲ್ಲಿ ಹಲವು ಬಾರಿ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಬಹುದು. ಯಶಸ್ವಿ ಜೈಸ್ವಾಲ್ ಜೊತೆ ರೋಹಿತ್ ಶರ್ಮಾ ಆರಂಭಿಕ ಜೋಡಿಯಾದಾಗಿನಿಂದ, ಪ್ಲೇಯಿಂಗ್-11 ಆಟಗಾರರ ಆಯ್ಕೆ ಟೀಮ್ ಇಂಡಿಯಾಕ್ಕೆ ತಲೆನೋವಾಗಿ ಪರಿಣಮಿಸಿದೆ.