
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆವೃತ್ತಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಹೊರ ಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕ ಪಾರ್ಥ್ ಜಿಂದಾಲ್ ಇದನ್ನು ಖಾತರಿಪಡಿಸಿದ್ದಾರೆ. ಗಾಯಕ್ಕೀಡಾಗಿರುವ ಐಯ್ಯರ್ ಮುಂಬರುವ ಐಪಿಎಲ್ನಲ್ಲಿ ಆಡುತ್ತಿಲ್ಲ.
ಮಾರ್ಚ್ 23ರಂದು ನಡೆದ ಭಾರತ vs ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಐಯ್ಯರ್ ಭುಜದ ಗಾಯಕ್ಕೀಡಾಗಿ ಮೈದಾನದಿಂದ ಹೊರ ಬಿದ್ದಿದ್ದರು. ಹೀಗಾಗಿ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಐಪಿಎಲ್ನಲ್ಲಿ ಐಯ್ಯರ್ಗೆ ಪಾಲ್ಗೊಳ್ಳಲಾಗುತ್ತಿಲ್ಲ.
ಐಯ್ಯರ್ ಅಲಭ್ಯತೆ ಬಗ್ಗೆ ಖಾತರಿ ಪಡಿಸಿ ಟ್ವೀಟ್ ಮಾಡಿರುವ ಪಾರ್ಥ್ ಜಿಂದಾಲ್, 'ನಮ್ಮ ನಾಯಕ ಶ್ರೇಯಸ್ ಐಯ್ಯರ್ನ ಗಾಯ ಈ ಐಪಿಎಲ್ ಕನಸನ್ನು ಧ್ವಂಸಗೊಳಿಸಿದೆ. ಧೈರ್ಯವಾಗಿರು ಶ್ರೇಯಸ್. ಬೇಗ ಗುಣಮುಖನಾಗುತ್ತೀ ಎಂದು ಭಾವಿಸುತ್ತೇನೆ. ಇನ್ನೂ ಬಲಿಷ್ಠನಾಗಿ ವಾಪಸ್ಸಾಗುತ್ತೀಯ ಅನ್ನೋ ನಂಬಿಕೆಯಿದೆ. ಟಿ20 ವಿಶ್ವಕಪ್ನಲ್ಲಿ ನಿನ್ನ ಅಗತ್ಯ ಭಾರತಕ್ಕಿದೆ,' ಎಂದು ಬರೆದುಕೊಂಡಿದ್ದಾರೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸ್ಕ್ಯಾನ್ ವರದಿಯ ಪ್ರಕಾರ, ಶ್ರೇಯಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬರಬಹುದು. ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ವೇಳೆ ಜಾನಿ ಬೇಸ್ಟೋವ್ ಬ್ಯಾಟ್ ತಾಗಿದ ಚೆಂಡನ್ನು ತಡೆಯುವ ಯತ್ನದ ವೇಳೆ ಐಯ್ಯರ್ ಭುಜಕ್ಕೆ ತೀವ್ರವಾದ ಗಾಯವಾಗಿತ್ತು. ಪಂದ್ಯದಲ್ಲಿ ಭಾರತ 66 ರನ್ನಿಂದ ಗೆದ್ದಿತ್ತು.