
ನವದೆಹಲಿ, ಮಾರ್ಚ್ 21: ಟೂರ್ನಿಗಳಲ್ಲಿ ಬ್ಯುಸಿಯಾಗಿರಬೇಕಾದ ಕ್ರಿಕೆಟಿಗರೆಲ್ಲ ಅನಿವಾರ್ಯ ಬಿಡುವನ್ನು ಅನುಭವಿಸುತ್ತಿದ್ದಾರೆ. ಕೊರೊನಾವೈರಸ್ನಿಂದಾಗಿ ವಿಶ್ವದಾದ್ಯಂತ ಯಾವುದೇ ಕ್ರೀಡಾಸ್ಪರ್ಧೆಗಳೂ ನಡೆಯುತ್ತಿಲ್ಲವಾದ್ದರಿಂದ ಬಹುತೇಕ ಕ್ರೀಡಾಪಟುಗಳು ಬಿಡುವನ್ನು ವಿಭಿನ್ನವಾಗಿ ಕಳೆಯುತ್ತಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಬಂದಿದ್ದ ದಕ್ಷಿಣ ಆಫ್ರಿಕಾ ತಂಡ, ಆತಿಥೇಯ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನಾಡಲಾಗಿರಲಿಲ್ಲ. ಆರಂಭಿಕ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಕೊರೊನಾವೈರಸ್ನಿಂದಾಗಿ ಇನ್ನೆರಡು ಪಂದ್ಯಗಳೂ ರದ್ದಾಗಿಬಿಟ್ಟವು.
ಹಾಗಾದರೆ ಬಿಡುವಿನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಏನು ಮಾಡುತ್ತಿದ್ದಾರೆ?. ಬಹುತೇಕ ಕ್ರಿಕೆಟಿಗರು ಕೊರೊನಾವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸುತ್ತಿದ್ದರೆ, ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಮಾತ್ರ ಮಾಂತ್ರಿಕನಾಗಿ ಬದಲಾಗಿಬಿಟ್ಟಿದ್ದಾರೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಸಿಸಿಐ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದೆ. ಸುಮಾರು 91 ಸೆಕೆಂಡ್ಗಳ ಈ ವಿಡಿಯೋದಲ್ಲಿ ಶ್ರೇಯಸ್ ಇಸ್ಪೀಟ್ ಕಾರ್ಡ್ಗಳನ್ನು ಬಳಸಿ ಮ್ಯಾಜಿಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಶ್ರೇಯಸ್ ಐಯ್ಯರ್ ಜೊತೆಯಲ್ಲಿ ಅವರ ಸಹೋದರಿ ನತಾಶಾ ಕೂಡ ಇದ್ದಾರೆ.
ವೀಡಿಯೋ ಜೊತೆಗೆ, 'ನಾವೆಲ್ಲ ಒಳಾಂಗಣದಲ್ಲಿದ್ದಾಗ ನಮ್ಮನ್ನು ಮನರಂಜಿಸೋಕೆ ನಮ್ಮ ಮನೆಯ ಜಾದೂಗಾರ ಶ್ರೇಯಸ್ ಐಯ್ಯರ್ ಇದ್ದಾರೆ ಅನ್ನೋದನ್ನು ನಂಬಿರಿ. ನಮ್ಮ ಮುಖದಲ್ಲಿ ನಗು ತಂದಿದ್ದಕ್ಕೆ ಧನ್ಯವಾದಗಳು ಚಾಂಪಿಯನ್,' ಎಂದು ಬಿಸಿಸಿಐ ಬರೆದುಕೊಂಡಿದೆ.