ಜುಲೈ 12ರಂದು ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಉಪನಾಯಕನಾಗಿ ಅಜಿಂಕ್ಯ ರಹಾನೆ ಮರು ಆಯ್ಕೆಯಾಗಿರುವುದು ಹಲವರಿಗೆ ಅಚ್ಚರಿಯನ್ನುಂಟು ಮಾಡಿದೆ.
ಇದೇ ವೇಳೆ ಕೆಲವು ಮಾಜಿ ಕ್ರಿಕೆಟಿಗರು, ಭಾರತ ತಂಡವು ಭವಿಷ್ಯದ ಯಾವುದೇ ಸಂಭಾವ್ಯ ನಾಯಕರನ್ನು ರೂಪಿಸುತ್ತಿಲ್ಲ. ಇದು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೀಗ ಭಾರತ ತಂಡದ ಭವಿಷ್ಯದ ನಾಯಕರ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಮುಂಬರುವ ವರ್ಷಗಳಲ್ಲಿ ಶುಭ್ಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ರಾಷ್ಟ್ರೀಯ ತಂಡದ ನಾಯಕರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ಅಕ್ಷರ್ ಪಟೇಲ್ ಅವರನ್ನು 2023ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕನಾಗಿ ನೇಮಿಸಲಾಯಿತು. ಆದರೆ ಶುಭ್ಮನ್ ಗಿಲ್ಗೆ ನಾಯಕತ್ವದ ಯಾವುದೇ ಅನುಭವವಿಲ್ಲ. ಆದರೆ, ಅವರು ಅಂಡರ್-19 ಮಟ್ಟದಲ್ಲಿ ಭಾರತೀಯ ತಂಡದ ಉಪನಾಯಕರಾಗಿದ್ದರು. ಅಂದಿನ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಪೃಥ್ವಿ ಶಾ ಅವರು ನಿರ್ಧಾರ ತೆಗೆದುಕೊಳ್ಳುತ್ತಿದ್ದರಿಂದ ಶುಭ್ಮನ್ ಗಿಲ್ ಅಷ್ಟೇನೂ ಮಹತ್ವದ ಪಾತ್ರ ವಹಿಸಿರಲಿಲ್ಲ.
ಇದೇ ವೇಳೆ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶನ್ ಭಾರತ ತಂಡದ ನಾಯಕತ್ವದ ರೇಸ್ಗೆ ಸೇರಿಕೊಳ್ಳಬಹುದು. ಆದರೆ, ಅದಕ್ಕೂ ಮುನ್ನ ಆಡುವ 11ರ ಬಳಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
"ಭಾರತ ತಂಡದ ಭವಿಷ್ಯದ ನಾಯಕರಾಗಿ ಶುಭ್ಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ರೂಪುಗೊಳ್ಳುತ್ತಾರೆ. ಏಕೆಂದರೆ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಪ್ರತಿ ಪಂದ್ಯದಲ್ಲೂ ಉತ್ತಮವಾಗುತ್ತಿದ್ದಾರೆ. ಐಪಿಎಲ್ನಲ್ಲಿ ಉಪನಾಯಕನ ಜವಾಬ್ದಾರಿ ನೀಡುವುದು ಅವರಿಗೆ ಯೋಚಿಸುವಂತೆ ಮಾಡುತ್ತದೆ".
"ಹಾಗಾಗಿ, ನನ್ನ ದೃಷ್ಟಿಯಲ್ಲಿ ಇವರಿಬ್ಬರೇ ಭವಿಷ್ಯದ ನಾಯಕರ ಅಭ್ಯರ್ಥಿಗಳು. ಬೇರೆ ಯಾರಾದರೂ ಇದ್ದರೆ ಅದು ಇಶಾನ್ ಕಿಶನ್, ಅದು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರೆ ಮಾತ್ರ," ಎಂದು ಸ್ಪೋರ್ಟ್ಸ್ ಟುಡೆಯೊಂದಿಗಿನ ಮಾತುಕತೆಯಲ್ಲಿ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
ಅಜಿಂಕ್ಯ ರಹಾನೆ ಉಪನಾಯಕನಾಗಿದ್ದು ತಪ್ಪೇನಿಲ್ಲ; ಯುವ ಆಟಗಾರನಿಗೆ ಅವಕಾಶ ತಪ್ಪಿತು
"ಭಾರತ ತಂಡಕ್ಕೆ ಮರಳಿರುವ ಅಜಿಂಕ್ಯ ರಹಾನೆಗೆ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಉಪನಾಯಕನ ಸ್ಥಾನ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಒಬ್ಬ ಯುವ ಆಟಗಾರನಿಗೆ ಅವಕಾಶ ಮಾಡಿಕೊಡಬಹುದಿತ್ತು," ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದರು.
"ಭಾರತ ತಂಡದ ಮ್ಯಾನೇಜ್ಮೆಂಟ್ ಕೆಲವು ಯುವ ಆಟಗಾರರೊಂದಿಗೆ ಸರಿಯಾದ ಮಾತುಕತೆ ನಡೆಸಬೇಕು ಮತ್ತು ನಾವು ನಿಮ್ಮನ್ನು ಭವಿಷ್ಯದ ನಾಯಕನಾಗಿ ನೋಡುತ್ತಿದ್ದೇವೆ ಎಂದು ಯುವ ಆಟಗಾರರಿಗೆ ಹೇಳಿ. ಅವರು ಈಗಿನಿಂದಲೇ ಭವಿಷ್ಯದ ನಾಯಕರಾಗಿ ಯೋಚಿಸಲು ಪ್ರಾರಂಭಿಸುತ್ತಾರೆ," ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದರು.