ಭಾನುವಾರದಿಂದ ವಡೋದಾರದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ಬಳಿಕ ಟಿ20 ಸರಣಿ ನಡೆಯಲಿದ್ದು, ಇದಾದ ಬಳಿಕ ಐಸಿಸಿ ಟಿ20 ವಿಶ್ವಕಪ್ 2026 ನಡೆಯಲಿದೆ. ಈ ಮೆಗಾ ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಹಲವು ಭರವಸೆಯ ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಟಿ20 ವಿಶ್ವಕಪ್ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಟಿ20 ತಂಡವನ್ನು ಸೇರಿಕೊಂಡಿದ್ದ ಶುಭಮನ್ ಗಿಲ್, ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇವರಿಗೆ ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ಉಪನಾಯಕರಾಗಿ ನೇಮಿಸಲಾಗಿತ್ತು. ಆದರೆ ಶುಭಮನ್ ಗಿಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಅಲ್ಲದೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಂಚಿತರಾದರು. ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಭಮನ್ ಗಿಲ್ ಕಾಣಿಸಿಕೊಂಡರು. ಈ ವೇಳೆ ಗಿಲ್ ಅವರಿಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿರುವ ಗಿಲ್ "ನಾನು ಇರಬೇಕಾದ ಸ್ಥಾನದಲ್ಲಿ ಇದ್ದೇನೆ. ನನ್ನ ಹಣೆ ಬರಹದಲ್ಲಿ ಏನಿದೆಯೋ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆಟಗಾರ ಯಾವಾಗಲೋ ದೇಶಕ್ಕಾಗಿ ಉತ್ತಮವಾದದನ್ನು ನೀಡಲು ಬಯಸುತ್ತಾನೆ. ಬಿಸಿಸಿಐ ಆಯ್ಕೆದಾರರ ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾನು ಅವರ ನಿರ್ಧಾರ ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್ 2025ರಲ್ಲಿ ಒಟ್ಟು 15 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 24.25ರ ಸರಾಸರಿ ಹಾಗೂ 137.26 ಸ್ಟ್ರೈಕ್ ರೇಟ್ನಲ್ಲಿ ಕೇವಲ 219 ರನ್ ಗಳಿಸಿದರು. ಈ ವೇಳೆ ಇವರ ಬ್ಯಾಟ್ನಿಂದ ಕೇವಲ 1 ಅರ್ಧಶತಕ ಮಾತ್ರ ಬಂದಿದೆ. ಇವರು ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಗಿಲ್ ಒಟ್ಟಾರೆ ಭಾರತದ ಪರ 36 ಚುಟುಕು ಪಂದ್ಯಗಳನ್ನು ಆಡಿದ್ದು, 28ರ ಸರಾಸರಿಯಲ್ಲಿ 869 ರನ್ ಕಲೆ ಹಾಕಿದ್ದಾರೆ. ಸದ್ಯ ಇವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಿ 20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ (ವಿಕೆಟ್ ಕೀಪರ್)