ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಮೊದಲ ದಿನದ ಪಂದ್ಯ ನಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ. ಹವಾಮಾನ ವರದಿಯ ಪ್ರಕಾರ ಬುಧವಾರ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಮಧ್ಯ ಟೀಮ್ ಇಂಡಿಯಾ ಕ್ಯಾಂಪ್ನಿಂದ ಮತ್ತೊಂದು ಸುದ್ದಿ ಹೊರ ಬಂದಿದೆ. ಭಾರತದ ಯುವ ಆಟಗಾರ ಅಂಗಳಕ್ಕೆ ಇಳಿಯುವುದು ಸಸ್ಪೆನ್ಸ್ ಆಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಆಡುವುದು ಅನುಮಾನವಾಗಿದೆ. ಗಿಲ್ ಅವರ ಕುತ್ತಿಗೆಯಲ್ಲಿ ಕೊಂಚ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರು ಮೊದಲ ಟೆಸ್ಟ್ನಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ಶುಭಮನ್ ಗಿಲ್ ಆರಂಭಿಕ ಟೆಸ್ಟ್ಗಳಲ್ಲಿ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡಿದ್ದರು. ಆದರೆ ಇತ್ತೀಚಿನ ಕೆಲ ತಿಂಗಳು ಗಳಲ್ಲಿ ಅವರು ಓಪನರ್ನಿಂದ ಮೂರನೇ ಕ್ರಮಾಂಕಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲದೆ ತಮಗೆ ಸಿಕ್ಕ ಸ್ಥಾನಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಗಿಲ್ ಬಾಂಗ್ಲಾದೇಶ ವಿರುದ್ಧ ಚೆನ್ನೈ ಟೆಸ್ಟ್ನಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಅಲ್ಲದೆ ಉಳಿದ ಪಂದ್ಯಗಳಲ್ಲೂ ಸಮಯೋಚಿತ ಆಟವನ್ನು ಪ್ರದರ್ಶಿಸಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರಿಗೆ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬ ಚಿಂತೆ ಶುರುವಾಗಿದೆ. ಈ ಕ್ರಮಾಂಕದಲ್ಲಿ ಗಿಲ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಕೆ.ಎಲ್ ರಾಹುಲ್ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಈ ಸ್ಥಾನದಲ್ಲಿ ಆಡುತ್ತಾರಾ ಅಥವಾ ಹೊಸ ಮುಖಕ್ಕೆ ಟೀಮ್ ಇಂಡಿಯಾ ಮಣೆ ಹಾಕುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆ ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.

ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದ ಸರ್ಫರಾಜ್ ಖಾನ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದರು. ಪರಿಣಾಮ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಇವರಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ಆಡುವ ಅವಕಾಶ ಮಾತ್ರ ಲಭಿಸಿರಲಿಲ್ಲ. ಈಗ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ, ಸರ್ಫರಾಜ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಶುಭಮನ್ ಗಿಲ್ ಇದುವರೆಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ 27 ಪಂದ್ಯಗಳನ್ನು ಆಡಿದ್ದು, 36.80 ರ ಸರಾಸರಿಯಲ್ಲಿ 1656 ರನ್ ಗಳಿಸಿದ್ದಾರೆ. ಐದು ಶತಕ ಮತ್ತು ಆರು ಅರ್ಧ ಶತಕಗಳನ್ನು ಗಳಿಸಿದ್ದಾರೆ.