
ನವದೆಹಲಿ: ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯಲ್ಲಿದ್ದ ಮಾಜಿ ಆಯ್ಕೆದಾರ ಗಗನ್ ಖೋಡಾ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತೀಯ ಪ್ಲೇಯಿಂಗ್ XI ಬಗ್ಗೆ ಅಸಮಾಧಾನ ತೋರಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡಬೇಕಿತ್ತು ಎಂದು ಖೋಡಾ ಹೇಳಿದ್ದಾರೆ.
ಭಾರತೀಯ 15 ಮಂದಿಯ ತಂಡದಲ್ಲಿ ಮಯಾಂಕ್ ಅರ್ಗವಾಲ್, ಕೆಎಲ್ ರಾಹುಲ್ ಅವರಂಥ ಬ್ಯಾಟ್ಸ್ಮನ್ಗಳನ್ನು ಬದಿಗಿರಿಸಿ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ಗೆ ಅವಕಾಶ ನೀಡಲಾಗಿತ್ತು. ಪ್ಲೇಯಿಂಗ್ XIನಲ್ಲೂ ಗಿಲ್ ಕಾಣಸಿಕೊಂಡಿದ್ದರು. ಆದರೆ ಗಿಲ್ ಅಂಥ ಪ್ರದರ್ಶನವೇನೂ ನೀಡಿರಲಿಲ್ಲ.
ಸ್ಪೋರ್ಟ್ಸ್ ಕೀಡಾ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಗಗನ್ ಖೋಡಾ, "ಇದು ಹೀಗಾಗಬಾರದಿತ್ತು. ಶುಬ್ಮನ್ಗಿಲ್ ಒಬ್ಬ ಆರಂಭಿಕ ಬ್ಯಾಟ್ಸ್ಮನ್ ಅಲ್ಲ. ಆತ ವಿವಿಎಸ್ ಲಕ್ಷ್ಮಣ್ ಇದ್ದಂತೆ. ಆತ ಮಿಡ್ಲ್ ಆರ್ಡರ್ನಲ್ಲಿ ಆಡಬೇಕಿತ್ತು. ಭಾರತ ತಂಡದಲ್ಲಿ ಮಯಾಂಕ್ ಅರ್ಗವಾಲ್ ಅಥವಾ ಪೃಥ್ವಿ ಶಾ ಅವರನ್ನಾದರೂ ಆಡಿಸಬೇಕಿತ್ತು," ಎಂದಿದ್ದಾರೆ.
ಸೌಥಾಂಪ್ಟನ್ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶುಬ್ಮನ್ ಕ್ರಮವಾಗಿ 28 ಮತ್ತು 8 ರನ್ ಗಳಿಸಿದ್ದರು. ಹೀಗಾಗಿಯೇ ಖೋಡಾ ಗಿಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಲ್ ರೌಂಡರ್ ಜಡೇಜಾ ಬದಲು ಶಾರ್ದೂಲ್ ಠಾಕೂರ್ ಅವರನ್ನಾದರೂ ಪ್ಲೇಯಿಂಗ್ XIನಲ್ಲಿ ಆಡಿಸಬೇಕಿತ್ತು ಎಂದು ಖೋಡಾ ಅಭಿಪ್ರಾಯಿಸಿದ್ದಾರೆ.