ಭಾರತ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾದ ಕಣ್ಣುಗಳು ನೆಟ್ಟಿವೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ಗೌತಮ್ ಗಂಭೀರ್ ಅವರು ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಈ ವೇಳೆ ಇವರ ಮುಂದೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.
ಕಳೆದ ತಿಂಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ರು. ಇಬ್ಬರೂ ಸ್ಟಾರ್ ಆಟಗಾರ ನಿವೃತ್ತಿ ನಿಜಕ್ಕೂ ತಂಡಕ್ಕೆ ತುಂಬಲಾಗದ ನಷ್ಟ. ಈ ಇಬ್ಬರು ದಶಕಗಳ ಕಾಲ ಟೀಮ್ ಇಂಡಿಯಾವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಶ್ರಮಿಸಿದ್ದಾರೆ. ಟೀಮ್ ಇಂಡಿಯಾ ಇವರಿಬ್ಬರ ಸೇವೆಯನ್ನು ಇಂಗ್ಲೆಂಡ್ ಸರಣಿಯ ವೇಳೆ ಕಳೆದುಕೊಳ್ಳಲಿದೆ. ಇವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿದ್ದವು. ಇದರ ಬಗ್ಗೆ ಗಿಲ್ ಅವರ ಮುಂದೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಲಾಯಿತು.

ನಾಯಕತ್ವದ ಶೈಲಿ ನನ್ನದೇ ಆಗಿರುತ್ತದೆ. ಮುಂದಾಳತ್ವವು ಅನುಭವದಿಂದ ವಿಕಾಸಗೊಳ್ಳುತ್ತದೆ. ನಾನು ಸಹ ಹಲವು ನಾಯಕರ ಅಡಿಯಲ್ಲಿ ಆಡಿದ್ದೇನೆ. ಆಟಗಾರರ ನಂಬಿಕೆ ಗಳಿಸಲು ಬಯಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದಲ್ಲಿ ಉತ್ತಮ ಫಲಿತಾಂಶಗಳು ಬರಲು ಸಾಧ್ಯ. ಒಬ್ಬ ನಾಯಕನ ಜವಾಬ್ದಾರಿಯನ್ನು ಅರಿತು ಮೈದಾನದಲ್ಲಿ ಆಡುವೆ. ಇನ್ನು ಬ್ಯಾಟಿಂಗ್ ಮಾಡುವಾಗ ನಾಯಕನಾಗಿ ಅಲ್ಲ, ಬ್ಯಾಟರ್ ಆಗಿ ಕಣಕ್ಕೆ ಇಳಿಯುವೆ. ನಾನು ನಿಶ್ಚಿತವಾಗಿ ರನ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಂಡದ ಪ್ರದರ್ಶನ ಮುಖ್ಯವಾಗಿದೆ ಎಂದು ಗಿಲ್ ಹೇಳಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರು. ಇವರು ತಂಡಕ್ಕಾಗಿ ದೀರ್ಘಕಾಲ ಆಡಿದ್ದಾರೆ. ಇವರಿಬ್ಬರ ಪ್ರದರ್ಶನದಿಂದ ತಂಡ ಹಲವು ಪಂದ್ಯಗಳನ್ನು ಗೆದ್ದಿದೆ. ಇವರಿಬ್ಬರ ಹಠಾತ್ ನಿವೃತ್ತಿ ನಿಜಕ್ಕೂ ತಂಡದ ಮೇಲೆ ಕೊಂಚ ಒತ್ತಡ ಹೇರಿದೆ. ಇನ್ನು ಈ ಆಟಗಾರರ ಸ್ಥಾನವನ್ನು ತುಂಬುವುದು ಕಷ್ಟ ಎಂದು ಗಿಲ್ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬುಮ್ರಾ ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬ ಪ್ರಶ್ನೆಗೆ ಕೋಚ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ. ಅವರು ಯಾವ 3 ಪಂದ್ಯಗಳನ್ನು ಆಡುತ್ತಾರೆ ಎಂಬುದು ನಿರ್ಧಾರವಾಗಿಲ್ಲ. ನಾವು ಅದರ ಬಗ್ಗೆ ಅವರೊಂದಿಗೆ ಮಾತನಾಡ ಬೇಕು. ಫಲಿತಾಂಶಗಳು ಹೇಗಿರಲಿವೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ. ಈ ಬಗ್ಗೆ ಅವರಿಗೂ ಚೆನ್ನಾಗಿ ತಿಳಿದಿದೆ. ಬುಮ್ರಾ ಅವರಂತಹ ಆಟಗಾರನನ್ನು ಬದಲಾಯಿಸುವುದು ಕಷ್ಟ, ಆದರೆ ನಮ್ಮಲ್ಲಿ ಸಾಕಷ್ಟು ಪ್ರತಿಭಾನ್ವಿತ ಬೌಲರ್ಗಳು ಇದ್ದಾರೆ ಎಂದು ಕೋಚ್ ತಿಳಿಸಿದ್ದಾರೆ.
ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಆರ್ಸಿಬಿ ಸಂಭ್ರಮಾಚರಣೆಯ ವೇಳೆ ಬೆಂಗಳೂರಿನಲ್ಲಿ ನಡೆದ ದುರಂತದ ಬಗ್ಗೆ ಕೋಚ್ ಗೌತಮ್ ಗಂಭೀರ್ ತುಟಿ ಬಿಚ್ಚಿದ್ದಾರೆ. ಭವಿಷ್ಯದಲ್ಲಿ ರೋಡ್ಶೋಗಳು ಇರುವುದಿಲ್ಲ ನಾನು ಭಾವಿಸುತ್ತೇನೆ. ಬೆಂಗಳೂರಿನಲ್ಲಿ ನಡೆದಿರುವುದು ತಪ್ಪೇ. ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾನು ಈ ಬಗ್ಗೆ ಯಾರನ್ನು ದೂಷಿಸುವವನಲ್ಲ. ಆಟಗಾರರ ಮತ್ತು ತಂಡಗಳ ಅಭಿಮಾನಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಗಂಭೀರ್ ತಿಳಿಸಿದ್ದಾರೆ.