ಭಾರತದಲ್ಲಿ ಅದಾಗ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದವು. ಆಗ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಮದ ನಿವೃತ್ತರಾಗಿದ್ದರು. ಅಲ್ಲದೆ ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಸಹ ಟೆಸ್ಟ್ಗೆ ವಿದಾಯ ಹೇಳಿದ್ದರು. ಹೀಗಾಗಿ ಟೀಮ್ ಇಂಡಿಯಾ ನಾಯಕ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಆಗಲೇ ಬಿಸಿಸಿಐ ಆಯ್ಕೆ ಸಮಿತಿ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಿತು.
ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸುವ ವೇಳೆ ತಾವು ಮೂರು ಪಂದ್ಯಗಳನ್ನು ಮಾತ್ರ ಆಡುವುದಾಗಿ ತಿಳಿಸಿದ್ದರು. ಹೀಗಾಗಿ ಈ ಯುವ ತಂಡದಿಂದ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದೆ. ಭಾರತದ ಯುವ ಪಡೆ ಲಾರ್ಡ್ಸ್ ಹಾಗೂ ಲೀಡ್ಸ್ ಪಂದ್ಯದಲ್ಲಿ ಗೆಲ್ಲಬಹುದಿತ್ತು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದೆ.

ಯಂಗ್ ಇಂಡಿಯನ್ ಟೀಮ್ ಐದು ಟೆಸ್ಟ್ ಪಂದ್ಯಗಳ ಕೊನೆಯ ಹಂತದ ವರೆಗೂ ಹೋರಾಡಿ ತನ್ನ ಕ್ಷಮತೆಯನ್ನು ಸಾಬೀತು ಪಡಿಸಿತು. ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಎರಡು ಪಂದ್ಯಗಳಲ್ಲಿ ಪುಟಿದೆದ್ದಿತು. ಈ ಯುವ ತಂಡದ ಬ್ಯಾಟಿಂಗ್ ನೋಡಿದರೆ, ಭಾರತ ಕ್ರಿಕೆಟ್ ತಂಡದ ಭವಿಷ್ಯ ಉತ್ತಮವಾಗಿದೆ ಎಂದು ತಿಳಿಯುತ್ತದೆ. ಹೀಗಾಗಿ ಶುಭಮನ್ ಗಿಲ್ ತಮ್ಮ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಟೀಮ್ ಇಂಡಿಯಾದ ನಾಯಕತ್ವವನ್ನು ಕೈಯಲ್ಲಿ ಹಿಡಿದ ಮೊದಲ ಸರಣಿಯಲ್ಲಿ ಶುಭಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿದರು. ಈ ಸರಣಿಯಲ್ಲಿ ಗಿಲ್ ಬ್ಯಾಟಿಂಗ್ ವಿಭಾಗವನ್ನೇ ತಾವೇ ಮುನ್ನಡೆಸಿದರು. ಅಲ್ಲದೆ 754 ರನ್ ಸಿಡಿಸಿದರು. ವಿರಾಟ್ ಕೊಹ್ಲಿ ಅವರ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ, ಇವರು ಈ ಸ್ಥಾನಕ್ಕೆ ನ್ಯಾಯ ಒದಗಿಸಿದರು. ಅಲ್ಲದೆ ಈ ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆದರು. ಅಲ್ಲದೆ ಈ ಸರಣಿಯಲ್ಲಿ ಶುಭಮನ್ ಗಿಲ್ ತಮ್ಮ ಪ್ಲ್ಯಾನ್ಗಳನ್ನು ಸರಿಯಾಗಿ ಮೈದಾನದಲ್ಲಿ ಎಕ್ಸಿಕ್ಯೂಟ್ ಮಾಡಿ ಎಲ್ಲರ ಗಮನ ಸೆಳೆದರು. ಅಲ್ಲದೆ ಸರಿಯಾದ ಸಮಯದಲ್ಲಿ ಬೌಲಿಂಗ್ ಚೇಂಜ್, ಫೀಲ್ಡ್ ಪ್ಲೇಸ್ಮೆಂಟ್ ಮಾಡಿ ಸೈ ಎನಿಸಿಕೊಂಡರು.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬಿಗಹುವಿನ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸಿದ್ದಾರೆ. ಅಲ್ಲದೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಆಲ್ರೌಂಡರ್ ರವೀಮದ್ರ ಜಡೇಜಾ ಈ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ 500ಕ್ಕೂ ಹೆಚ್ಚು ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಪ್ರಸಿದ್ಧ್ ಕೃಷ್ಣಾ ತಂಡಕ್ಕೆ ನೆರವಾದರು.