ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಅವರು ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ಪೆಟ್ಟು ಬಿದ್ದಿದೆ. ಕೋಲ್ಕತ್ತ ಟೆಸ್ಟ್ನಲ್ಲಿ ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್, ಎರಡನೇ ಟೆಸ್ಟ್ನಿಂದ ಹೊರ ನಡೆದಿದ್ದರು. ಅಲ್ಲದೆ ಇವರ ಗಾಯ ಗುಣವಾಗಲು ಇನ್ನು ದಿನಗಳು ಬೇಕಾಗುವುದರಿಂದ ಇವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೂ ಕೈ ಬಿಡಲಾಗಿದೆ. ನವೆಂಬರ್ 30 ರಿಂದ ರಾಂಚಿಯಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ಶುಭಮನ್ ಗಿಲ್ ಅವರು ಈ ವರ್ಷ ಅಂಗಳಕ್ಕೆ ಡೌಟ್ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ತಂಡವನ್ನು ಸೇರಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆಗೂ ಶುಭಮನ್ ಗಿಲ್ ಚೇತರಿಸಿಕೊಳ್ಳುವುದು ಅನುಮಾನ ಎಂದು ಪಿಟಿಐ ವರದಿ ಮಾಡಿದೆ. ಹೀಗಾಗಿ ಇವರು ಈ ವರ್ಷ ಮತ್ತೆ ಅಂಗಳಕ್ಕೆ ಇಳಿಯುವುದು ಅನುಮಾನ ಎಂದಾಗಿದೆ.

ವರದಿಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಕಿವೀಸ್ ವಿರುದ್ಧದ ಏಕದಿನ ಸರಣಿಯ ವೇಳೆ ಗಿಲ್ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಈಗ ಬರುತ್ತಿರುವ ಈ ಸುದ್ದಿಗಳು ನಿಜವಾದ್ರೆ ಗಿಲ್, ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಇದು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ತಯಾರಿಗೆ ಪೆಟ್ಟು ಬೀಳಲಿದೆ.
ಜನವರಿಯಲ್ಲಿ ನ್ಯೂಜಿಲೆಂಡ್ ಭಾರತದ ಪ್ರವಾಸವನ್ನು ಆರಂಭಿಸಲಿದೆ. ಈ ವೇಳೆ ಮೂರು ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 11 ರಂದು, ಜನವರಿ 14 ರಂದು ರಾಜ್ಕೋಟ್ನಲ್ಲಿ ಎರಡನೇ ಪಂದ್ಯ ಮತ್ತು ಜನವರಿ 18 ರಂದು ಇಂದೋರ್ನಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇನ್ನು ಟಿ20ಐ ಪಂದ್ಯಗಳು ಜನವರಿ 21 ರಿಂದ 31 ರವರೆಗೆ ನಾಗ್ಪುರ, ರಾಯ್ಪುರ, ಗುವಾಹಟಿ, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಯಲಿವೆ.

ಅಭಿಷೇಕ್ ಶರ್ಮಾ ಅವರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶಸ್ವಿ ಜೈಸ್ವಾಲ್ ಈ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇವರು 2024ರ ನಂತರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.