
ವೆಲ್ಲಿಂಗ್ಟನ್: ಕೋಲ್ಕತ್ತಾ ನೈಟ್ ರೈಡರ್ಸ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಇನ್ನುಳಿದ ಪಂದ್ಯಗಳಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯಲಿದೆ.
14ನೇ ಆವೃತ್ತಿಯ ಐಪಿಎಲ್ ವೇಳೆ ಬಯೋ ಬಬಲ್ ಒಳಗಿದ್ದವರಿಗೆ ಕೋವಿಡ್ ಸೋಂಕು ತಗುಲಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಸೋಂಕಿನ ಪ್ರಕರಣಗಳು ಕಾಣಿಸಿತ್ತು. ಹೀಗಾಗಿ ಮೇ 4ರಂದು ಬಿಸಿಸಿಐ ಐಪಿಎಲ್ ಅನ್ನು ಅಮಾನತುಗೊಳಿಸಿತ್ತು.
ಸ್ಪೊರ್ಟ್ಸ್ ಟುಡೇ ಜೊತೆ ಮಾತನಾಡಿದ ಬ್ರೆಂಡನ್ ಮೆಕಲಮ್, 'ಪ್ಯಾಟ್ ಕಮಿನ್ಸ್ ಮತ್ತು ಇಯಾನ್ ಮಾರ್ಗನ್ ಇಬ್ಬರೂ ಶಾಂತ ಮತ್ತು ಕೂಲ್ ಆಟಗಾರರು. ಅವರನ್ನು ಒಂದು ವೇಳೆ ನಾವು ಕಳೆದುಕೊಳ್ಳಬೇಕಾಗಿ ಬಂದರೆ ಅವರ ಪಾತ್ರವನ್ನು ತುಂಬಲು ಬೇರೆ ಆಟಗಾರರು ಮುಂದೆ ಬರಬೇಕಾಗುತ್ತದೆ. ಇದು ಇನ್ನಿತರ ಆಟಗಾರರಿಗೆ ಒಳ್ಳೆಯ ಅವಕಾಶವಾಗಲಿದೆ,' ಎಂದಿದ್ದಾರೆ.
'ಈ ಅವಕಾಶ ಕೆಲ ಭಾರತೀಯ ಆಟಗಾರರಿಗೆ ಸಿಗಬಹುದು. ಅವರೀಗ ಅಂಥ ಜವಾಬ್ದಾರಿ ತೆಗೆದುಕೊಳ್ಳಲು ತಯಾರಿಲ್ಲದಿರಬಹುದು. ಆದರೆ ಶುಬ್ಮನ್ ಗಿಲ್ ಅಥವಾ ನಿತೀಶ್ ರಾಣಾ ಅವರಂಥವರಿಗೆ ಇದು ಒಳ್ಳೆಯ ಅವಕಾಶ. ಅವಕಾಶವನ್ನು ಬಳಸಿಕೊಳ್ಳಬೇಕಾದರೆ ಅವರು ಅವರದ್ದೇ ನಿರ್ಭೀತ ಆಟ ಆಡಬೇಕಾಗುತ್ತದೆ,' ಎಂದು ಮೆಕಲಮ್ ಹೇಳಿದ್ದಾರೆ.