
ನವದೆಹಲಿ, ಫೆಬ್ರವರಿ 26: ಸಿಎಎ ಪರ-ವಿರೋಧಕ್ಕೆ ಸಂಬಂಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ವಿನಂತಿಸುತ್ತಿದ್ದೇನೆ ಎಂದು ಯುವಿ ಕೋರಿಕೊಂಡಿದ್ದಾರೆ.
ದೆಹಲಿ ಹಿಂಸಾಚಾರದ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ಗಾಗಿ ವಿಶ್ವದ ಗಮನ ಸೆಳೆಯುತ್ತಿದ್ದ ಯುವಿ, ಮನುಷ್ಯತ್ವವನ್ನು ಎತ್ತಿಹಿಡಿಯುವಂತೆ, ಎಲ್ಲರನ್ನೂ ಗೌರವಿಸುವಂತೆ, ಜೊತೆಯಾಗಿ ಬಾಳುವಂತೆ ಟ್ವಿಟರ್ ಸಾಲಿನಲ್ಲಿ ವಿನಂತಿಸಿದ್ದಾರೆ.
'ದೆಹಲಿಯಲ್ಲಿ ನಡೆಯುತ್ತಿರುವ ವಿಚಾರ ಹೃದಯ ಹಿಂಡುತ್ತಿದೆ. ದಯವಿಟ್ಟು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಎಲ್ಲರನ್ನೂ ವಿನಂತಿಸುತ್ತಿದ್ದೇನೆ. ಇಂಥಹ ಸಂದರ್ಭವನ್ನು ನಿಭಾಯಿಸಲು ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಾರೆಂದು ಆಶಿಸುತ್ತೇನೆ. ಅಂತಿಮವಾಗಿ, ನಾವೆಲ್ಲರೂ ಮನುಷ್ಯರು ಅನ್ನೋದು ಮಾತ್ರ ನಿಜ. ಹಾಗಾಗಿ ನಾವೆಲ್ಲರೂ ಪ್ರತಿಯೊಬ್ಬರನ್ನೂ ಪ್ರೀತಿ, ಗೌರವದಿಂದ ಕಾಣಬೇಕಿದೆ,' ಎಂದು ಯುವಿ ಬರೆದುಕೊಂಡಿದ್ದಾರೆ.
ಸೋಮವಾರ (ಫೆಬ್ರವರಿ 26) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಭೇಟಿ ನೀಡಿದ ಸಂದರ್ಭ ಈಶಾನ್ಯ ದೆಹಲಿಯಲ್ಲಿ ತೀವ್ರ ಹಿಂಸಾಚಾರ ಸಂಭವಿಸಿತ್ತು. ಉದ್ರಿಕ್ತ ಜನರ ಗುಂಪು ಮನೆ, ಅಂಗಡಿಗಳು, ಪೆಟ್ರೋಲ್ ಪಂಪ್, ವಾಹನ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದರು. ಎದುರಾಳಿ ಗುಂಪುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.