ಮಧ್ಯಮ ಕ್ರಮಾಂಕದ ಆರ್ ಸ್ಮರಣ್ ಬಾರಿಸಿದ ಶತಕ ಹಾಗೂ ಅಭಿನವ್ ಮನೋಹರ್ ಸ್ಫೋಟಕ ಆಟದ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಉತ್ತಮ ಮೊತ್ತ ಕಲೆ ಹಾಕಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಕಲೆ ಹಾಕಿತು. ಚೊಚ್ಚಲ ವಿಜಯ್ ಹಜಾರೆ ಟ್ರೋಫಿಯ ಕನಸಿನಲ್ಲಿರುವ ವಿದರ್ಭ ಸವಾಲಿನ ಮೊತ್ತವನ್ನು ಚೇಸ್ ಮಾಡಲಿದೆ.
ವಡೋದರಾದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶತಕ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ದೇವದತ್ ಪಡಿಕ್ಕಲ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಎರಡನೇ ವಿಕೆಟ್ಗೆ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕೆವಿ ಅನೀಶ್ ಜೋಡಿ ತಂಡಕ್ಕೆ ನೆರವಾಗುವ ಸೂಚನೆ ನೀಡಿತು. ಆದರೆ ಅನೀಶ್ 3 ಬೌಂಡರಿ ನೆರವಿನಿಂದ 21 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಮಯಾಂಕ್ ಸಹ ಹೆಚ್ಚು ಹೊತ್ತು ನಿಲ್ಲನಿಲ್ಲ. ಇವರು 32 ರನ್ ಬಾರಿಸಿ ಔಟ್ ಆದರು.
67 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ಆರ್.ಸ್ಮರಣ್ ಹಾಗೂ ಕೆ.ಎಲ್ ಶ್ರೀಜೇತ್ ತಂಡಕ್ಕೆ ಆಧಾರವಾಯಿತು. ಈ ಜೋಡಿ ಮಿಡ್ಲ್ ಓವರ್ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟಿಂಗ್ ನಡೆಸಿತು. ಅಲ್ಲದೆ ರನ್ ವೇಗಕ್ಕೂ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡಿತು. ಈ ಜೋಡಿ 4ನೇ ವಿಕೆಟ್ಗೆ 160 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಕೆಎಲ್ ಶ್ರೀಜೇತ್ 74 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿ ಔಟ್ ಆದರು.
ಐದನೇ ವಿಕೆಟ್ಗೆ ಸ್ಮರಣ್ ಹಾಗೂ ಅಭಿನವ್ ಮನೋಹರ್ ಉತ್ತಮ ಜೊತೆಯಾಟವನ್ನು ನೀಡಿದರು. ಈ ಜೋಡಿ ತಂಡಕ್ಕೆ ಅಗತ್ಯವಿದ್ದ ರನ್ಗಳನ್ನು ಕಲೆ ಹಾಕಿ ಅಬ್ಬರಿಸಿತು. ಈ ಜೋಡಿ 63 ಎಸೆತಗಳಲ್ಲಿ 100 ರನ್ ಕಲೆ ಹಾಕಿ ತಂಡಕ್ಕೆ ಆಧಾರವಾಯಿತು. ಮಹತ್ವದ ಪಂದ್ಯದಲ್ಲಿ ಅಮೊಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಆಟಗಾರ ಆರ್.ಸ್ಮರಣ್ 92 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 101 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಅಬ್ಬರದ ಆಟಕ್ಕೆ ವಿದರ್ಭ ಬೌಲರ್ಗಳು ಸ್ಟನ್ ಆದರು. ಇವರು 42 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 79 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.