SMAT 2021: ರೋಚಕ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಗೆದ್ದ ಕರ್ನಾಟಕ ಕ್ವಾ.ಫೈನಲ್ಗೆ ಲಗ್ಗೆ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ರೋಚಕ ಗೆಲುವು ಸಾಧಿಸಿದೆ. ಸೌರಾಷ್ಟ್ರ ವಿರುದ್ಧ ನಡೆದ ಈ ಪಂದ್ಯದಲ್ಲಿ ಅಂತಿಮ ಓವಲ್ನಲ್ಲಿ ಕರ್ನಾಟಕ ಪಡೆ 2 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದ್ದು ಸೌರಾಷ್ಟ್ರಕ್ಕೆ ಮನೆಯ ದಾರಿ ತೋರಿಸಿದೆ. ಕರ್ನಾಟಕ ಪರವಾಗಿ ಅಭಿನವ್ ಮನೋಹರ್ ನೀಡಿದ ಅದ್ಭುತ ಪ್ರದರ್ಶನ ಕರ್ನಾಟಕದ ಗೆಲುವಿಗೆ ಕಾರಣವಾಯಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಕರ್ನಾಟಕಕ್ಕೆ 146 ರನ್ಗಳ ಸಾಧಾರಣ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ಅಭಿನವ್ ಮನೋಹರ ಅವರ ಭರ್ಜರಿ ಪ್ರದರ್ಶನದಿಂದಾಗಿ ಕರ್ನಾಟಕ ಗೆಲುವಿನ ಭರವೆಸಯನ್ನು ಹೊಂದಿತ್ತು. ಇದಕ್ಕೆ ಪೂರಕವಾಗಿ ಅಂತಿಮ ಹಂತದವರೆಗೂ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದ ಮನೋಹರ್ ತಂಡಕ್ಕೆ ಗೆಲುವನ್ನು ತಂದಿತ್ತು. ಕೊನೆಯ ಒಂದು ಎಸೆತ ಉಳಿದಿರುವಂತೆಯೇ ಕರ್ನಾಟಕ ಜಯ ಸಾಧಿಸಿ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.

ಸೌರಾಷ್ಟ್ರಕ್ಕೆ ಆಧಾರವಾದ ಶೆಲ್ಡನ್ ಜಾಕ್ಸನ್
ಸೌರಾಷ್ಟ್ರ ತಂಡದ ಪರವಾಗಿ ಶೆಲ್ಡನ್ ಜಾಕ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸೌರಾಷ್ಟ್ರ ತಂಡಕ್ಕೆ ಬ್ಯಾಟಿಂಗ್ನಲ್ಲಿ ಆಧಾರವಾದರು. ಕಢವಲ 10 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರ ತಂಡ ಕೂಡ ಆರಂಭಿಕ ಆಘಾತ ಅನುಭವಿಸಿತು. ನಂತರ ಜಾಕ್ಸನ್ ಹಾಗೂ ಮಂಕಡ್ ಉತ್ತಮ ಜೊತೆಯಾಟವನ್ನು ನೀಡಿದರು. 43 ಎಸೆತ ಎದುರಿಸಿದ ಜಾಕ್ಸನ್ 50 ರನ್ ಬಾರಿಸಿದರು. ಈ ಇನ್ನಿಂಗ್ಸ್ನಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಒಳಗೊಂಡಿತ್ತು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್ಗಳಿಸಲು ಶಕ್ತವಾಯಿತು.
ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್

ಮಿಂಚಿದ ವೈಶಾಕ್, ಕಾರಿಯಪ್ಪ
ಇನ್ನು ಬೌಲಿಂಗ್ನಲ್ಲಿ ಕರ್ನಾಟಕ ತಂಡದ ಪರವಾಗಿ ವಿಜಯ ಕುಮಾರ್ ವೈಶಾಕ್, ಕೆಸಿ ಕಾರಿಯಪ್ಪ ಹಾಗೂ ವಿ ಕೌಶಿಕ್ ಮಿಂಚಿದರು. ಈ ಮೂವರು ಬೌಲರ್ಗಳು ಕೂಡ ತಲಾ 2 ವಿಕೆಟ್ ಪಡೆದು ಎದುರಾಳಿ ಸೌರಾಷ್ಟ್ರ ತಂಡಕ್ಕೆ ಆಘಾತ ನೀಡಿದ್ದಾರೆ. ಅದರಲ್ಲೂ ಕಾರಿಯಪ್ಪ ಹಾಗೂ ಕೌಶಿಕ್ ರನ್ ನಿಯಂತ್ರದಲ್ಲಿಯೂ ಅದ್ಭುತ ಯಶಸ್ಸು ಸಾಧಿಸಿದರು. ಈ ಮೂಲಕ ಸೌರಾಷ್ಟ್ರ ತಂಡ ದೊಡ್ಡ ಮೊತ್ತ ಗಳಿಸದಂತೆ ಅಡ್ಡಿಯಾದರು.

ಆರಂಭಿಕ ಆಘಾತ
ಇನ್ನು ಸೌರಾಷ್ಟ್ರ ನೀಡಿದ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಶರತ್ ಬಿಆರ್, ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಆದರೆ ರೋಹನ್ ಕಡಂ 33 ರನ್ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ನೆರವಾದರು. ನಂತರ ಅಭಿನವ್ ಮನೋಹರ್ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ 60 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಸೋಲಿನತ್ತ ಮುಖಮಾಡಿತ್ತು.

ಅಭಿನವ್ ಮನೋಹರ ಆಟ
ಅಭಿನವ್ ಮನೋಹರ್ ಪ್ರದರ್ಶನ ಪಂದ್ಯದಲ್ಲಿ ಕರ್ನಾಟಕ ತಂಡದ ಹಿಡಿತ ಸಡಿಲಿಸದಂತೆ ಮಾಡಿತು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಅಭಿನವ್ ಮನೋಹರ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದರು. 49 ಎಸೆತಗಳನ್ನು ಎದುರಿಸಿದ ಅವರು ಭರ್ಜರಿ 70 ರನ್ ಬಾರಿಸಿದರು. ಅಂತಿಮ ಎರಡು ಎಸೆತಗಳಲ್ಲಿ ಎರಡು ರನ್ಗಳಿರುವಾಗ ಸಿಕ್ಸರ್ ಬಾರಿಸಿ ತಂಡದ ಗೆಲುವನ್ನು ಅಭಿನವ್ ಮನೋಹರ್ ಸಾರಿದರು. ಈ ಮೂಲಕ ಮನೀಶ್ ಪಾಂಡೆ ಪಡೆ ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications