ಅಹಮದಾಬಾದ್ನಲ್ಲಿ ಶುಕ್ರವಾರ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿರುವ ಜಾರ್ಖಂಡ, ಕರ್ನಾಟಕ ತಂಡವನ್ನು 2 ವಿಕೆಟ್ಗಳಿಂದ ಮಣಿಸಿದೆ. ಆಲ್ರೌಂಡರ್ ಆಟದ ಪ್ರದರ್ಶನ ನೀಡಿರುವ ಅನುಕುಲ್ ರಾಯ್ (ಅಜೇಯ 95, 2 ವಿಕೆಟ್) ಅಬ್ಬರಿಸಿದರು. ಇವರು ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸುವಲ್ಲಿ ಸಫಲರಾದರು. ಈ ಗೆಲುವಿನ ಮೂಲಕ ಜಾರ್ಖಂಡ್ ತಂಡ ಎಲೈಟ್ "ಡಿ" ಗುಂಪಿನ ಪಂದ್ಯದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. '
ಜಾರ್ಖಂಡ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡ ಮೊದಲು ಬ್ಯಾಟ್ ಮಾಡಿತು. ಆದರೆ ಈ ಅವಧಿಯಲ್ಲಿ ದೇವದತ್ ಪಡಿಕ್ಕಲ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ವೇಳೆ ದೇವದತ್ 15 ರನ್ ಬಾರಿಸಿ ಔಟ್ ಆದರು. ಭರವಸೆಯ ಬ್ಯಾಟರ್ ಕರುಣ್ ನಾಯರ್ (4) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಅವರ ಆಟ 37 ರನ್ಗಳಿಗೆ ಸೀಮಿತವಾಯಿತು.

ಮಧ್ಯಮ ಕ್ರಮಾಂಕದಲ್ಲಿ ರವಿಚಂದ್ರನ್ ಸ್ಮರಣ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟರ್ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲಿಲ್ಲ. ಪ್ರವೀಣ್ ದುಬೆ 13, ಶ್ರೇಯಸ್ ಗೋಪಾಲ್ 19, ವಿದ್ಯಾಧರ್ ಪಟೇಲ್ 16 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕರ್ನಾಟಕ ತಂಡ ಅಂತಿಮವಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 157 ರನ್ ಸೇರಿಸಿತು. ಜಾರ್ಖಂಡ ತಂಡದ ಪರ ಸೌರಾಷ್ಟ್ರ ಮಿಶ್ರಾ 3, ಸೌರಭ್ ಶೇಖರ್ 2 ವಿಕೆಟ್ ಪಡೆದು ಮಿಂಚಿದರು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಜಾರ್ಖಂಡ ಬ್ಯಾಟರ್ಗಳು ಆರಂಭದಲ್ಲಿ ಜವಾಬ್ದಾರಿ ಮರೆತರು. ಇಶಾನ್ ಕಿಶನ್ (15), ಉತ್ಕರ್ಷ ಸಿಂಗ್ (4), ಕುಮಾರ್ ಕುಶಾಗರ್ (9) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಜಾರ್ಖಂಡ್ 38 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ವಿರಾಟ್ ಸಿಂಗ್ (12) ಹಾಗೂ ಅನುಕೂಲ್ ರಾಯ್ ಜೋಡಿ ಕೊಂಚ ತಂಡಕ್ಕೆ ಆಧಾರವಾಯಿತು. ಉಳಿದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಒಂದು ಬದಿಯಲ್ಲಿ ವಿಕೆಟ್ಗಳು ಬೀಳುತ್ತಾ ಇದ್ದರೂ ಮತ್ತೊಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಅನುಕೂಲ್ ರಾಯ್ ಅಬ್ಬರಿಸಿದರು. ಇವರು 58 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 95 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಜಾರ್ಖಂಡ್ 19.4 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಸೇರಿಸಿತು. ಕರ್ನಾಟಕದ ಪರ ವಿದ್ಯಾಧರ್ ಪಟೇಲ್ 3, ಪ್ರವೀಣ್ ದುಬೆ 2 ವಿಕೆಟ್ ಕಬಳಿಸಿದರು. ಈ ಸೋಲಿನ ಮೂಲಕ ಕರ್ನಾಟಕದ ಆಡಿದ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದ್ದು, 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.