
ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಇಂದು ಚಾಲನೆ ದೊರೆತಿದ್ದು ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ. ಜಮ್ಮು ಕಾಶ್ಮೀರ ವಿರುದ್ಧ ಪಂದ್ಯದ ಬೆಂಗಳೂರಿನ ಆಲೂರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ನಡೆಯಿತು. ಟಾಸ್ ಗೆದ್ದ ಜಮ್ಮು ಕಾಶ್ಮೀರ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಬ್ಯಾಟಿಂಗ್ಗೆ ಇಳಿದ ಕರ್ನಾಟಕ ನಿಧಾನಗತಿಯ ಆರಂಭವನ್ನು ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಮೊದಲ ವಿಕೆಟ್ಗೆ 37 ರನ್ಗಳ ಕೊಡುಗೆಯನ್ನು ನೀಡಿದರು. 17 ಎಸೆತಗಳಲ್ಲಿ 18 ರನ್ ಬಾರಿಸಿದ ಪಡಿಕ್ಕಲ್ ಪರ್ವೀಜ್ ರಸೂಲ್ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ರೋಹನ್ ಕದಂ ಕೇವಲ 1 ರನ್ ಬಾರಿಸಿ ಔಟ್ ಆದರು.
ಬಳಿಕ ನಾಯಕ ಕರುಣ್ ನಾಯಕ 27 ರನ್ಗಳಿಗೆ ಔಟ್ ಆಗಿ ಹೊರ ನಡೆದರು. ಪವನ್ ದೇಶ್ಪಾಂಡೆ 21 ರನ್ಗಳ ಕೊಡುಗೆ ನೀಡಿದರು. ಅಲ್ಲಿಗೆ ಕರ್ನಾಟಕ 11.4 ಓವರ್ಗಳಲ್ಲಿ 73 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಕೆಎಲ್ ಶ್ರೀಜಿತ್ ಹಾಗೂ ಅನಿರುದ್ಧ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ತಂಡಕ್ಕೆ 65 ರನ್ಗಳ ಕೊಡುಗೆಯನ್ನು ಈ ಜೋಡಿ ನೀಡಿತ್ತು.
ಕರ್ನಾಟಕ ತಂಡದ ಪರವಾಗಿ ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿರುವ ಶ್ರೀಜಿತ್ 31 ಎಸೆತಗಳಲ್ಲಿ 48 ರನ್ ಬಾರಿಸಿ ಮಿಂಚಿದರು. ಅನಿರುದ್ಧ 26 ರನ್ಗಳಿಸಿ ಶ್ರೀಜಿತ್ಗೆ ಉತ್ತಮ ಸಾಥ್ ನೀಡಿ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಔಟಾದರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಕರ್ನಾಟಕ 150 ರನ್ಗಳನ್ನು ಗಳಿಸಲು ಕರ್ನಾಟಕ ತಂಡ ಯಶಸ್ವಿಯಾಗಿತ್ತು.
ಕರ್ನಾಟಕ ತಂಡ ನೀಡಿದ್ದ 151 ರನ್ಗಳ ಗುರಿಯನ್ನು ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡದ ಮೇಲೆ ಕರ್ನಾಟಕ ಬೌಲರ್ಗಳು ಉತ್ತಮ ನಿಯಂತ್ರಣ ಸಾಧಿಸಿದರು. ಜಮ್ಮು ಕಾಶ್ಮೀರ ತಂಡ 18.4 ಓವರ್ಗಳಲ್ಲಿ 107 ರನ್ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಜಮ್ಮು ಕಾಶ್ಮೀರ ತಂಡದ ಪರವಾಗಿ ಅಬ್ದುಲ್ ಸಮದ್ ಗಳಿಸಿದ 30 ರನ್ ಅತ್ಯಧಿಕ ಮೊತ್ತವಾಗಿದೆ. ಕರ್ನಾಟಕ ತಂಡದ ಪರವಾಗಿ ಅಭಿಮನ್ಯು ಮಿಥುನ್ 4 ವಿಕೆಟ್ ಕಬಳಿಸಿದರೆ ಪ್ರಸಿಧ್ ಕೃಷ್ಣ 3, ಜೆ ಸುಜಿತ್ 2 ಹಾಗೂ ರೋನಿತ್ ಮೋರೆ 1 ವಿಕೆಟ್ ಪಡೆದರು.