ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಸದ್ಯ ಭಾರಿ ಸುದ್ದಿಯಲ್ಲಿದ್ದರು. ಮೊದಲು ಮದುವೆಯ ಕಾರಣಕ್ಕೆ ಸುದ್ದಿಯಲ್ಲಿದ್ದರೆ, ಈಗ ಮದುವೆ ರದ್ದಾಗಿ ಸುದ್ದಿಯಲ್ಲಿದ್ದಾರೆ. ಈ ನಡುವೆ ಸ್ಮೃತಿ ಇದೇ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಇದೇ ವೇಳೆ ಸ್ಮೃತಿ ನನಗೆ ಕ್ರಿಕೆಟ್ಗಿಂತ ಹೆಚ್ಚೇನೂ ಇಷ್ಟವಿಲ್ಲ. ಭಾರತೀಯ ಜೆರ್ಸಿ ಧರಿಸುವುದು ನನಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಸ್ಮೃತಿ ಮಂಧಾನ ಅಮೆಜಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, "ಭಾರತದ ಜೆರ್ಸಿ ತೊಟ್ಟ ಬಳಿಕ ನನ್ನ ಎಲ್ಲಾ ಚಿಂತೆಗಳು ದೂರವಾಗುತ್ತದೆ. ಕಳೆದ 12 ವರ್ಷಗಳಿಂದ ಭಾರತಕ್ಕಾಗಿ ಆಡುತ್ತಿದ್ದೇನೆ. ಕ್ರಿಕೆಟ್ ಆಟಕ್ಕಿಂತ ನನಗೆ ಹೆಚ್ಚು ಪ್ರಿಯವಾದದ್ದು ಯಾವುದೂ ಇಲ್ಲ" ಎಂದು ತಿಳಿಸಿದ್ದಾರೆ. ದೇಶದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದೇ ನನಗೆ ಪ್ರೇರಣೆ. ಕ್ರಿಕೆಟ್ ಅಂಗಳಕ್ಕೆ ಇಳಿದಾಗ ನನ್ನ ಎಲ್ಲ ಸಮಸ್ಯೆಗಳನ್ನು ಬದಿಗಿಟ್ಟು ದೇಶಕ್ಕಾಗಿ ಆಡುತ್ತೇನೆ. ದೇಶದ ಕೋಟ್ಯಾಂತರ ಅಭಿಮಾನಿಗಳನ್ನು ನಾನು ಪ್ರತಿನಿಧಿಸುತ್ತೇನೆ ಎಂದು ತಿಳಿಸಿದರು.

ನನಗೆ ಬಾಲ್ಯದಿಂದಲೂ ಬ್ಯಾಟಿಂಗ್ ಅಂದರೆ ಪಂಚ ಪ್ರಾಣ. ಆಗಿನ ಆ ಪ್ರೀತಿಯನ್ನು ಯಾರು ಗುರುತಿಸಿರಲಿಲ್ಲ. ವಿಶ್ವ ಚಾಂಪಿಯನ್ ಎಂದು ಕರೆಸಿಕೊಳ್ಳುವದೇ ನನ್ನ ಗುರಿಯಗಿತ್ತು. ಭಾರತದಲ್ಲಿ ನಡೆದ ವಿಶ್ವಕಪ್ ಗೆದ್ದಿರುವುದು ಇಷ್ಟು ವರ್ಷಗಳಿಂದ ಮಾಡಿದ ಹೋರಾಟಕ್ಕೆ ಪ್ರತಿಫಲವಾಗಿದೆ. ನಾವು ಅದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆವು. ಹಲವು ಬಾರಿ ನಾವು ಅಂದುಕೊಂಡ ಫಲಿತಾಂಶಗಳು ಬಂದಿರಲಿಲ್ಲ. ಆದರೆ ಈ ಬಾರಿ ಕಪ್ಗೆ ಮುತ್ತಿಡುವುದೇ ನಮ್ಮ ಗುರಿಯಾಗಿತ್ತು. ಈ ಕನಸು ನನಸಾದಾಗ ತುಂಬ ಖುಷಿಯಾಗಿತು ಎಂದು ತಿಳಿಸಿದ್ದಾರೆ.
ಸ್ಮೃತಿ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ ಅವರ ವಿವಾಹ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮದುವೆ ಸಮಾರಂಭವನ್ನು ಮುಂದಡಲಾಗಿತ್ತು. ಕೆಲ ದಿನಗಳ ಹಿಂದೆ ಸ್ಮೃತಿ ತಮ್ಮ ಹಾಗೂ ಪಲಾಶ್ ಮದುವೆ ರದ್ದಾಗಿದೆ ಎಂದು ತಿಳಿಸಿದ್ದರು.
ಭಾರತ ಹಾಗೂ ಶ್ರೀಲಂಕಾ ನಡುವಣ ಟಿ20 ಪಂದ್ಯಕ್ಕೆ ಮಂಗಳವಾರ ತಂಡವನ್ನು ಪ್ರಕಟಿಸಲಾಗಿತ್ತು. ಈ ತಂಡದಲ್ಲಿ ಸ್ಮೃತಿ ಮಂಧಾನ ಅವರಿಗೆ ಉಪನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಶ್ರೀಲಂಕಾ ವಿರುದ್ಧದ 5 ಪಂದ್ಯ ಟಿ20 ಸರಣಿ ಡಿಸೆಂಬರ್ 21 ರಿಂದ ಆರಂಭವಾಗಲಿದ್ದು, ಡಿಸೆಂಬರ್ 30ರ ವರಗೆ ನಡೆಯಲಿದೆ. ಈ ಸರಣಿಗಾಗಿ ಭಾರತ ತಂಡದಲ್ಲಿ ಇಬರು ಯುವ ಆಟಗಾರ್ತಿಯರಿಗೂ ಸ್ಥಾನ ನೀಡಲಾಗಿದೆ.