ಸ್ಮೃತಿ ಮಂಧಾನ ವಿವಾಹ ಬಂಧನದಲ್ಲಿ ಬಂಧಿ ಆಗುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕ್ ಕಾದಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಆ ದಿನ ಬೆಳಗ್ಗೆ ಸ್ಮೃತಿ ತಂದೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮದುವೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು. ಆದರೆ ಈಗ ಸ್ಮೃತಿ ತಮ್ಮ ವಿವಾಹದ ಬಗ್ಗೆ ಮೌನ ಮುರಿದಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಮಂಧಾನ ಈ ವಿವಾಹವನ್ನು ಕುಟುಂಬಗಳು ರದ್ದುಗೊಳಿಸಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸ್ಮೃತಿ ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ತಿಳಿಸಿದ್ದಾರೆ. ಇನ್ನು ಇಂತಹ ಗೊಂದಲ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ತಿಳಿದಿದ್ದೇನೆ. ನಾನು ಮದುವೆ ರದ್ದಾಗಿದ್ದನ್ನು ಮಾತ್ರ ಸ್ಪಷ್ಟಪಡಿಸುವೆ ಎಂದಿದ್ದಾರೆ. ಆದರೆ ಸ್ಮೃತಿ ಮದುವೆ ರದ್ದಾಗಲು ಅಸಲಿ ಕಾರಣ ಏನು ಎಂಬುದನ್ನು ಮಾತ್ರ ಹೇಳಿಲ್ಲ. ಅಲ್ಲದೆ ನಾನು ತುಂಬ ಖಾಸಗಿ ವ್ಯಕ್ತಿ ನಾನು ಅದನ್ನು ಹಾಗೆಯೇ ಕಾಪಾಡಿಕೊಳ್ಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುವೆ. ನನ್ನಂತೆ ನೀವು ಸಹ ಹೀಗೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನಂದರೆ ಈ ಸಮಯದಲ್ಲಿ ಎರಡೂ ಕುಟುಂಬದ ಖಾಸಗಿ ಸಮಯವನ್ನು ಗೌರವಿಸಿ. ನಮಗೆ ಮುಂದೆ ಸಾಗಲು ಸಹಾಯ ಮಾಡಿ ಎಂದು ಸ್ಮೃತಿ ಬರೆದುಕೊಂಡಿದ್ದಾರೆ. ಇನ್ನು ದೇಶಕ್ಕಾಗಿ ಇನ್ನು ಆಡುವುದು ಹಾಗೂ ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಗುರಿಯಾಗಿದೆ ಸ್ಮೃತಿ ಬರೆದಿದ್ದಾರೆ.
ಇದೇ ವಿಚಾರವಾಗಿ ಪಲಾಶ್ ಮುಚ್ಚಲ್ ಸಹ ಪೋಸ್ಟ್ ಮಾಡಿದ್ದಾರೆ. ನಾನು ನನ್ನ ಜೀವನದಲ್ಲಿ ಮುಂದೆ ಹೋಗಲು ಬಯಸುತ್ತೇನೆ. ನಾನು ನನ್ನ ಸಂಬಂಧಗಳಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಸ್ಮೃತಿಗೆ ಮೋಸ ಮಾಡಿದರು ಎಂಬ ಆರೋಪಕ್ಕೂ ಇದೇ ಪೋಸ್ಟ್ನಲ್ಲಿ ಪಲಾಶ್ ಉತ್ತರ ನೀಡಿದ್ದಾರೆ. ಆಧಾರರಹಿತ ವದಂತಿಗಳಿಗೆ ಜನರು ಸುಲಭವಾಗಿ ಪ್ರತಿಕ್ರಿಯಿಸುವುದನ್ನು ನೋಡುವುದು ನನಗೆ ತುಂಬ ಕಷ್ಟಕರವಾಗಿತ್ತು. ಇದು ನನ್ನ ಜೀವನದ ಕಷ್ಟಕರ ಸಮಯ ಎಂದು ಹೇಳಿದ್ದಾರೆ.
ಸ್ಮೃತಿ ಮಂಧಾನ ಅವರ ಮದುವೆ ರದ್ದಾದ ಬಗ್ಗೆ ಜೆಮಿಮಾ ಸಹ ಇನ್ಸ್ಟಾಗ್ರಾಮ್ನಲ್ಲಿ ಒಂದು ಹಾಡನ್ನು ಪೋಸ್ಟ್ ಮಾಡಿದ್ದಾರೆ. "ಮ್ಯಾನ್ ಐ ನೀಡ್" ಎಂಬ ಹಾಡನ್ನು ಜೇಮಿಮಾ ಹಾಡಿರುವ ವಿಡಿಯೋ ಹಾಕಿಕೊಂಡಿದ್ದಾರೆ. ಇನ್ನು ಜೆಮಿಮಾ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಆದರೆ ಸ್ಮೃತಿ ಮದುವೆ ಮುಂದೂಡಿದ ಬಳಿಕ ಜೆಮಿಮಾ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ಬಂದರು. ಕ್ರಿಕೆಟ್ ಅಭಿಮಾನಿಗಳು ಈ ನಡೆಯನ್ನು ನಿಜವಾದ ಸ್ನೇಹ ಎಂದು ಶ್ಲಾಘಿಸಿದ್ದರು.