ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ನವೆಂಬರ್ 23ರ ಭಾನುವಾರ ತಮ್ಮ ಬಹುಕಾಲದ ಗೆಳೆಯ ಪಾಲಾಶ್ ಮುಚ್ಚಲ್ ಅವರೊಂದಿಗೆ ಹಸಿ ಮಣೆ ಏರಲಿದ್ದರು. ಆದರೆ ಅವರ ಕುಟುಂಬದಲ್ಲಿ ಆದ ಸಮಸ್ಯೆಯಿಂದಾಗಿ ಸ್ಮೃತಿ ಮಂಧಾನ ಅವರ ಮದುವೆಯನ್ನು ಮುಂದೂಡಲಾಗಿದೆ. ಹಾಗಿದ್ದರೆ ಮದುವೆ ಮುಂದೂಡಲು ಅಸಲಿ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಬಳಿಕ ಸ್ಮೃತಿ ಮಂಧಾನ ಹಸೆಮಣೆ ಏರಲಿದ್ದಾರೆ, ಎಂಬ ಸುದ್ದಿಗೆ ಕೆಲ ದಿನಗಳ ಹಿಂದೆ ಪುಷ್ಠಿ ಸಹ ಸಿಕ್ಕಿತ್ತು. ಸ್ಮೃತಿ ಅವರು ನಿಶ್ಚಿತಾರ್ಥದ ಉಂಗುರ ತೊಟ್ಟು ಭಾರತ ತಂಡದ ಆಟಗಾರ್ತಿಯರೊಂದಿಗೆ ಒಂದು ವೀಡಿಯೊ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಪಲಾಶ್ ಅವರು ಸ್ಮೃತಿ ಅವರಿಗೆ ಡಿವೈ ಪಾಟೀಲ್ ಮೈದಾನದಲ್ಲಿ ಪ್ರೇಮ ನಿವೇದನೆ ಸಹ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು. ಶನಿವಾರ ಸ್ಮೃತಿ ಮಂಧಾನ ಮನೆಯಲ್ಲಿ ಹಳದಿ ಕಾರ್ಯಕ್ರಮ ಸಹ ಅದ್ಧೂರಿಯಾಗಿ ನಡೆಯಿತು. ಭಾನುವಾರ ಬೆಳಗ್ಗೆ ಸ್ಮೃತಿ ಮಂಧಾನ ವಿವಾಹ ಬಂಧನದಲ್ಲಿ ಬಂಧಿ ಆಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮನೆಯಲ್ಲಿ ಆದ ತೊಂದರೆಯಿಂದಾಗಿ ಮದುವೆಯನ್ನು ಮುಂದೂಡಲಾಗಿದೆ.

ಸ್ಮೃತಿ ಮಂಧಾನ ಅವರ ತಂದೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಕಾರಣಕ್ಕಾಗಿ ಭಾನುವಾರ ನಡೆಯಬೇಕಿದ್ದ ಮದುವೆಯನ್ನು ಮುಂದೂಡಲಾಗಿದೆ ಎಂದು ಸ್ಮೃತಿ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಬೆಳಗ್ಗೆ ಉಪಹಾರ ಸೇವಿಸುವಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು. ಅವರ ಆರೋಗ್ಯ ಚೇತರಿಸಿಕೊಳ್ಳಬಹುದು ಎಂದು ಕೊಂಚ ಹೊತ್ತ ಕಾಯಲಾಯಿತು. ಆದರೆ ಆರೋಗ್ಯದಲ್ಲಿ ತೀವ್ರ ಏರು ಪೇರು ಆಗಿದ್ದರಿಂದ ಅವರನ್ನು ಆಂಬುಲೆನ್ಸ್ ಮೂಲಕ ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಿದೆವು ಎಂದು ಮ್ಯಾನೇಜರ್ ತುಹಿನ್ ಮಿಶ್ರಾ ಮಧ್ಯಾಹ್ನ ತಿಳಿಸಿದ್ದಾರೆ. ಇನ್ನು ಇಂತಹದ ಸನ್ನಿವೇಶದಲ್ಲಿ ಮದುವೆ ಆಗಲು ಸ್ಮೃತಿ ಅವರಿಗೆ ಮನಸ್ಸು ಇಲ್ಲದ ಕಾರಣ, ವಿವಾಹವನ್ನು ಮುಂದೂಡಲಾಯಿತು ಎಂದು ಅವರು ಹೇಳಿದ್ದಾರೆ.
ಸ್ಮೃತಿ ಅವರ ತಂದೆ ಗುಣಮುಖರಾದ ಬಳಿಕವೇ ಮದುವೆಯ ಬಗ್ಗೆ ತೀರ್ಮಾನಿಸಲಾಗುತ್ತದೆ. ಸದ್ಯ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಮ್ಯಾನೇಜರ್ ತಿಳಿಸಿದ್ದಾರೆ.