ವಿರಾಟ್ ಕೊಹ್ಲಿಯನ್ನು ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ಭಾರತದ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಭಾರತದಲ್ಲಿ ಕೆಲ ಸುದ್ದಿ ಮಾಧ್ಯಮಗಳು ಬೇಕಂತಲೇ ವಿರಾಟ್ ಕೊಹ್ಲಿಯವರನ್ನು ಗುರಿಯಾಗಿಸಿಕೊಂಡು ಈ ರೀತಿಯ ಸುದ್ದಿಗಳನ್ನು ಹಬ್ಬಿಸುವ ಮೂಲಕ ಕೆಟ್ಟ ಸಂಚನ್ನು ಕೊಹ್ಲಿ ವಿರುದ್ಧ ನಡೆಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಇಂಥ ಸಮಯದಲ್ಲಿ ಈ ರೀತಿಯ ಸುದ್ದಿ ಹಬ್ಬಿಸುವುದು ನಾಚಿಕೆಗೇಡಿನ ಕೆಲಸ
ಇನ್ನೂ ಮುಂದುವರೆದು ಈ ವಿಚಾರದ ಕುರಿತು ಮಾತನಾಡಿರುವ ಸಲ್ಮಾನ್ ಬಟ್ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ನಾಯಕತ್ವ ಎಂಥದ್ದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಹಾಗೂ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಕೆಲ ಮಾಧ್ಯಮಗಳು ಈ ರೀತಿಯ ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿರುವುದು ನಾಚಿಕೆಗೇಡಿನ ಕೆಲಸ ಎಂದು ಸಲ್ಮಾನ್ ಬಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕನ ಬದಲಾವಣೆ ವಿಚಾರ ಇಲ್ಲವೇ ಇಲ್ಲ ಎಂದ ಬಿಸಿಸಿಐ
ಟಿ ಟ್ವೆಂಟಿ ವಿಶ್ವಕಪ್ ಮುಗಿದ ನಂತರ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ನಾಯಕನಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ನಾಯಕನ ಬದಲಾವಣೆಯ ಪ್ರಸ್ತಾಪವೇ ಬಿಸಿಸಿಐನಲ್ಲಿ ನಡೆದಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಈ ಸುದ್ದಿಗೆ ಅಂತ್ಯ ಹಾಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದೆ, ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವವರೆಗೂ ನಾಯಕತ್ವ ಬದಲಾವಣೆಯ ಪ್ರಮೇಯವೇ ಬರುವುದಿಲ್ಲ ಎಂದು ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.