
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯ ಮುಖ್ಯಸ್ಥೆ ರೂಪಾಲಿ ಬಸು ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ್ದು ದೇಶದ ಖ್ಯಾತ ಹೃದ್ರೋಗ ತಜ್ಞ ಕನ್ನಡಿಗ ಡಾ.ದೇವಿ ಶೆಟ್ಟಿ ಮಂಗಳವಾರ ಆಗಮಿಸಲಿದ್ದು ಬುಧವಾರ ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಸೌರವ್ ಗಂಗೂಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ರೂಪಾಲಿ ಅವರು ಮಾಹಿತಿಯನ್ನು ನೀಡಿದ್ದಾರೆ. ಸೌರವ್ ಗಂಗೂಲಿಯವರ ಕುಟುಂಬ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿ ವೈದ್ಯಕೀಯ ಮಂಡಳಿ ಹೃದಯದ ಎರಡು ರಕ್ತನಾಳಗಳಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿಗೆ ಆಂಜಿಯೋಪ್ಲಾಸ್ಟಿ ನಡೆಸಲು ನಿರ್ಧರಿಸಲಾಗಿದೆ ಎಂದು ಡಾ. ರೂಪಾಲಿ ಬಸು ಹೇಳಿದ್ದಾರೆ.
"ನಮ್ಮ ವೈದ್ಯಕೀಯ ಮಂಡಳಿಯ 9 ಸದಸ್ಯರು ತಜ್ಞತ ಜೊತೆಗೆ ಇಂದು 11.30ಕ್ಕೆ ಸಂವಾದವನ್ನು ನಡೆಸಿದೆ. ಸದ್ಯ ಈ ಆ್ಯಂಜಿಯೋ ಪ್ಲಾಸ್ಟಿಯನ್ನು ಮುಂದೂಡುವುದು ಸುರಕ್ಷಿತ ಆಯ್ಕೆ ಎಂದು ನಿರ್ಧರಿಸಲಾಗಿದೆ. ಗಂಗೂಲಿ ಈಗ ಸುರಕ್ಷಿತವಾಗಿದ್ದು ಆರೋಗ್ಯ ಸ್ಥಿರವಾಗಿದೆ" ಎಂದು ರೂಪಾಲಿ ಬಸು ವಿವರಿಸಿದ್ದಾರೆ. ಮಂಡಳಿಯ ಸಭೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರು ಕೂಡ ಹಾಜರಿದ್ದರು ಎಂದು ಡಾ. ಬಸು ತಿಳಿಸಿದ್ದಾರೆ.
ಸೌರವ್ ಗಂಗೂಲಿಗೆ ಶನಿವಾರ ಲಘು ಹೃದಯಾಘಾತ ಸಂಭವಿಸಿದ ಬಳಿಕ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಒಂದು ಆ್ಯಾಂಜಿಯೋಪ್ಲಾಸ್ಟಿ ನಡೆಸಲಾಗಿದೆ. ಗಂಗೂಲಿಯ ಬಲ ಪರಿಧಮನಿಯ ಅಪದಮನಿಯಲ್ಲಿ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ನಡೆಸಲಾಗಿತ್ತು. ಈಗ ಮತ್ತೆರಡು ಅಪಧಮನಿಯಲ್ಲಿ ದೋಷ ಕಾಣಿಸಿಕೊಂಡಿರುವ ಕಾರಣ ಇನ್ನೊಂದು ಆ್ಯಂಜಿಯೋಪ್ಲಾಸ್ಟಿ ನಡೆಸಬೇಕಾಗಿದೆ ಎಂದು ರೂಪಾಲಿ ಬಸು ಹೇಳಿದ್ದಾರೆ.
ಯಾವಾಗ ಗಂಗೂಲಿ ಬಿಡುಗಡೆಯಾಗಬಹುದು ಎಂಬ ಪ್ರಶ್ನೆಗೆ ರೂಪಾಲಿ ಬಸು "ಡಾ. ದೇವಿ ಶೆಟ್ಟಿ ನಾಳೆ ಆಗಮಿಸಲಿದ್ದಾರೆ. ನಾವು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಅವರು ಬುಧವಾರದ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ" ಎಂದಿದ್ದಾರೆ.