
ನವದೆಹಲಿ, ಏಪ್ರಿಲ್ 14: ಟೀಮ್ ಇಂಡಿಯಾ ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸೌರವ್ ಗಂಗೂಲಿ ಇವರಲ್ಲಿ ನಿಮ್ಮ ನೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, 'ಸೌರವ್ ಗಂಗೂಲಿ' ಎಂದು ಉತ್ತರಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ನಾಯಕತ್ವ ಸಮಾವೇಶದಲ್ಲಿ ಮಾತನಾಡುತ್ತ ಸೆಹ್ವಾಗ್, ಧೋನಿ, ಗಂಗೂಲಿ, ಕೊಹ್ಲಿಯಲ್ಲಿ ಗಂಗೂಲಿ ಉತ್ತಮ ನಾಯಕ ಎಂದಿದ್ದಾರೆ. ಗಂಗೂಲಿ ನಾಯಕತ್ವದ ಅಡಿಯಲ್ಲಿ ಆಡಿದ ಅನುಭವದ ಆಧಾರದಲ್ಲಿ ಸೆಹ್ವಾಗ್ ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಹಾಗಂತ ಸೆಹ್ವಾಗ್ ಅವರು ಧೋನಿ ಮತ್ತು ಕೊಹ್ಲಿಯನ್ನು ಸಂಪೂರ್ಣ ಕಡೆಗಣಿಸಿಲ್ಲ. ಉತ್ತಮ ನಾಯಕನಾಗಿ ಸೆಹ್ವಾಗ್ ಅವರು ಗಂಗೂಲಿಯವರನ್ನು ಆರಿಸಿದ್ದಾರಾದರೂ ದ್ವಿತೀಯ ಮತ್ತು ತೃತೀಯ ಆದ್ಯತೆ ಕ್ರಮವಾಗಿ ಧೋನಿ ಮತ್ತು ಕೊಹ್ಲಿಗೆ ನೀಡಿದ್ದಾರೆ. ಅನುಭವದ ಆಧಾರದಲ್ಲಿ ತಾನು ಗಂಗೂಲಿ ಅವರನ್ನು ಆರಿಸಿರುವುದಾಗಿ ವಿ.ಸೆಹ್ವಾಗ್ ಹೇಳಿಕೊಂಡಿದ್ದಾರೆ.
'ಹೊಸ ತಂಡವೊಂದು ನಿಮ್ಮೆದುರು ಇದ್ದಾಗ ಅನುಭವಿ ಆಟಗಾರನಿಗೆ ನಾಯಕತ್ವ ಲಭಿಸಿದರೆ ನೀವು ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ. ಅನುಭವ, ನಾಯಕತ್ವ ಮತ್ತು ಫಲಿತಾಂಶ ಈ ಮೂರೂ ಒಂದಕ್ಕೊಂದು ಅನುಗುಣವಾಗಿದೆ' ಎಂದು ಸೆಹ್ವಾಗ್ ವಿವರಿಸಿದ್ದಾರೆ.