ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡವು ಟೆಸ್ಟ್ ಸರಣಿಗೂ ಮುನ್ನ ರಣಕಹಳೆ ಮೊಳಗಿಸಿದೆ. ಪಾಕಿಸ್ತಾನವನ್ನು ತವರಿನಲ್ಲಿ ಹೀನಾಯವಾಗಿ ಸೋಲಿಸಿದ ನಂತರ ಬಾಂಗ್ಲಾದೇಶ ತಂಡವು ಪ್ರಪಂಚದಾದ್ಯಂತ ಸುದ್ದಿಯಲ್ಲಿದೆ.
ಇದೀಗ ಭಾರತ ಪ್ರವಾಸದಲ್ಲಿ ಅಗ್ನಿ ಪರೀಕ್ಷೆ ಎದುರಿಸಲು ಬಾಂಗ್ಲಾದೇಶ ತಂಡ ಸಜ್ಜಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಟೆಸ್ಟ್ ಸರಣಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸೆಪ್ಟೆಂಬರ್ 8 ರಂದು ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ.

ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಾವ ತಂಡ ಪ್ರಾಬಲ್ಯ ಸಾಧಿಸಬಹುದು ಎಂಬುದರ ಬಗ್ಗೆ ಸೌರವ್ ಗಂಗೂಲಿ ಭವಿಷ್ಯ ನುಡಿದ್ದಾರೆ. 'ತವರಿನಲ್ಲಿ ಪಾಕಿಸ್ತಾನವನ್ನು ಸೋಲಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಬಾಂಗ್ಲಾದೇಶದ ಆಟಗಾರರಿಗೆ ಅಭಿನಂದನೆಗಳು. ಆದರೆ ಭಾರತ ತಂಡ ವಿಶಿಷ್ಟವಾಗಿದ್ದು, ದೇಶ ಮತ್ತು ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಈ ತಂಡದ ಬ್ಯಾಟಿಂಗ್ ಘಟಕ ಅತ್ಯಂತ ಬಲಿಷ್ಠವಾಗಿದೆ. ಬಾಂಗ್ಲಾದೇಶ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಭಾರತ ತಂಡ ಮಾತ್ರ ಸರಣಿ ಗೆಲ್ಲಲಿದೆ. ಆದರೆ ಬಾಂಗ್ಲಾದೇಶದಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗಬಹುದು. ಯಾಕೆಂದರೆ ಪಾಕಿಸ್ತಾನವನ್ನು ಸೋಲಿಸಿದ ನಂತರ ಬಾಂಗ್ಲಾದೇಶ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ.
ಪಾಕಿಸ್ತಾನ ತಂಡದ ಇತ್ತೀಚೆಗಿನ ಪ್ರದರ್ಶನ ಕುರಿತು ಗಂಗೂಲಿ ಮಾತನಾಡಿದ್ದು, 'ಪ್ರತಿಭೆಯ ಕೊರತೆ ನಿಜವಾಗಿಯೂ ಅಲ್ಲಿ ಕಾಣಿಸುತ್ತಿದೆ. ಪಾಕಿಸ್ತಾನದ ಬಗ್ಗೆ ಯೋಚಿಸಿದಾಗಲೆಲ್ಲ ನಮಗೆ ಮಿಯಾಂದಾದ್, ವಾಸಿ, ವಕಾರ್, ಸಯೀದ್ ಅನ್ವರ್, ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ನೆನಪಾಗುತ್ತಾರೆ. ಅಂತಹ ಪ್ರತಿಭೆಗಳು ಈಗ ಇಲ್ಲ. ಪಾಕಿಸ್ತಾನ ಕ್ರಿಕೆಟ್ಗೆ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.