ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ತಂಡ ಈ ಎರಡು ಮೆಗಾ ಟೂರ್ನಿಗಳಿಗೆ ಸಿದ್ಧವಾಗುತ್ತಿದೆ. ಏಷ್ಯಾಕಪ್ಗೆ ಟೀಮ್ ಇಮಡಿಯಾ ಬಳಗವನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದ್ದು ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ವಿಚಾರವಾಗಿ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾ ಆಟಗಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ.
ಏಷ್ಯಾಕಪ್ಗೆ ಟೀಮ್ ಇಂಡಿಯಾ ಆಯ್ಕೆಯ ಬಳಿಕ ಮಾತನಾಡಿರುವ ಸೌರವ್ ಗಂಗೂಲಿ ಪ್ರಸ್ತುತ ಭಾರತ ತಂಡ ವಿಶ್ವಕ್ರಿಕೆಟ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಅಲ್ಲದೆ ಭಾರತದ ಬೌಲಿಂಗ್ ವಿಭಾಗದ ಬಗ್ಗೆ ವಿಶೇಷ ಭರವಸೆ ವ್ಯಕ್ತಪಡಿಸಿದ ಅವರು ಇದು ಬಲಿಷ್ಠವಾದ ಬೌಲಿಂಗ್ ಪಡೆ ಎಂದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನ ಪ್ರೋಮೋದಲ್ಲಿ ಮಾತನಾಡಿ ಗಂಗೂಲಿ "ಬೌಲಿಂಗ್ ವಿಭಾಗದಲ್ಲಿ ಶಮಿ, ಬೂಮ್ರಾ, ಸಿರಾಜ್ ಮತ್ತು ಪ್ರಸಿದ್ಧ್ ಇದ್ದಾರೆ. ಇದಕ್ಕಿಂತ ಉತ್ತಮವಾದ ಬೌಲಿಂಗ್ ಪಡೆಯನ್ನು ಹೊಂದಲು ಸಾಧ್ಯವಿಲ್ಲ" ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಸೌರವ್ ಗಂಗೂಲಿ "ಇಷ್ಟು ಉತ್ತಮವಾದ ಆಟಗಾರರ ಪಡೆಯನ್ನು ಭಾರತ ತಂಡ ಹೊಂದಿದೆ. ಏಷ್ಯಾ ಕಪ್ ಹಾಗೂ ವಿಶ್ವಕಪ್ನಲ್ಲಿ ಅವರು ಉತ್ತಮ ಗುಣಮಟ್ಟದ ಹಾಗೂ ದೃಢನಿರ್ಧಾರದ ಆಟವನ್ನು ಪ್ರದರ್ಶಿಸಬೇಕಿದೆ" ಎಂದು ಸೌರವ್ ಗಂಗೂಲಿ ಟೀಮ್ ಇಂಡಿಯಾ ಆಟಗಾರರ ಪಡೆಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಇನ್ನು ಟೀಮ್ ಇಂಡಿಯಾದಲ್ಲಿ ಈ ಬಾರಿ ಕೂಡ ನಂ.4 ಕ್ರಮಾಂಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆಯೂ ಸೌರವ್ ಗಂಗೂಲಿ ಬಳಿ ಪ್ರಶ್ನೆ ಕೇಳಲಾಗಿದ್ದು ಇದಕ್ಕೆ ಮಾಜಿ ನಾಯಕ ವಿಶ್ವಾಸದ ಮಾತುಗಳನಾಡುವ ಮೂಲಕ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕ ಸಮಸ್ಯೆಯಾಗಲಾರದು ಎಂದಿದ್ದಾರೆ.
"ಭಾರತದಲ್ಲಿ ಸಾಕಷ್ಟು ಅದ್ಭುತವಾದ ಪ್ರತಿಭೆಗಳು ಇದೆ. ಈ ವಿಚಾರವಾಗಿ ನಾನು ಕುಡ ಸಾಕಷ್ಟು ಬಾರಿ ಕೇಳಿದ್ದೇನೆ. ಇಲ್ಲಿ ನಮಗೆ ಒಂದೆರಡು ಮಾತ್ರವೇ ಆಯ್ಕೆಗಳು ಇಲ್ಲ. ಸಾಕಷ್ಟು ಆಯ್ಕೆಗಳು ಇರುವ ಕಾರಣ ಒಂದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ನಮಗೆ ಓರ್ವ ಆಟಗಾರನನ್ನು ನಿರ್ಧರಿಸಲು ಸಾಧ್ಯವಾಗದಿರುವುದೇ ಸಮಸ್ಯೆ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬುದನ್ನು ಕೋಚ್ ದ್ರಾವಿಡ್, ಆಯ್ಕೆಗಾರರು ಹಾಗೂ ನಾಯಕ ರೋಹಿತ್ ಶರ್ಮಾ ನಿರ್ಧರಿಸಬೇಕಿದೆ. ಅವರಿಗೆ ಸೂಕ್ತ ಎನಿಸುವ ಆಟಗಾರನ ಮೇಲೆ ನನಗೂ ನಂಬಿಕೆಯಿದೆ" ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ. ಯಾರು ಬೇಕಾದರೂ ನಂಬರ್ 4 ಕ್ರಮಾಂಕದಲ್ಲಿ ಆಡಬಹುದು ಎಂದಿದ್ದಾರೆ ಸೌರವ್ ಗಂಗೂಲಿ.
"ನಂಬರ್ 4 ಎನ್ನುವುದು ಕೇವಲ ಒಂದು ಸಂಖ್ಯೆ. ಅದನ್ನು ಯಾರು ಬೇಕಾದರೂ ತುಂಬಬಹುದು. ಏಕದಿನ ಕ್ರಿಕೆಟ್ನಲ್ಲಿ ನಾನು ಕೂಡ ಮಧ್ಯ ಕ್ರಮಾಂಕದಲ್ಲಿ ಆಡುತ್ತಿದ್ದೆ. ಸಚಿನ್ ತೆಂಡೂಲ್ಕರ್ ನಾಯಕನಾಗಿದ್ದಾಗ ಆರಂಭಿಕನಾಗಿ ಆಡುವಂತೆ ತಿಳಿಸಿದ್ದಾರೆ ಆರಂಭಿಕನಾಗಿ ಆಡಿದ್ದೆ. ಸಚಿನ್ ತೆಂಡೂಲ್ಕರ್ ವಿಚಾರದಲ್ಲಿಯೂ ಅದೇ ಆಗಿತ್ತು. ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಸಚಿನ್ಗೆ ನಾಯಕ ಆರಂಭಿಕನಾಗಿ ಆಡುವಂತೆ ತಿಳಿಸಿದ್ದರು. ಅದಾದ ಬಳಿಕ ಅವರು ವಿಶ್ವದರ್ಜೆಯ ಆಟಗಾರ ಎನಿಸಿಕೊಂಡರು. ಯಾರು ಕೂಡ ನಾಳ್ಕನೇ ಕ್ರಮಾಂಕದಲ್ಲಿ ಆಡಬಹುದು. ವಿರಾಟ್ ಕೊಹ್ಲಿ ಇದ್ದಾರೆ, ಶ್ರೇಯಸ್ ಐಯ್ಯರ್ ಕೆಎಲ್ ರಾಹುಲ್ ಅವರಂತಾ ಆಟಗಾರರು ಇದ್ದಾರೆ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಏಷ್ಯಾಕಪ್ಗೆ 17 ಆಟಗಾರರ ಬಳಗವನ್ನು ಆಯ್ಕೆಸಮಿತಿ ಸೋಮವಾರ ಪ್ರಕಟಿಸಿದೆ. ಗಾಯಗೊಂಡು ಹೊರಗುಳಿದಿದ್ದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಈ ತಂಡದಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಯುಜುವೇಂದ್ರ ಚಾಹಲ್ ಹಾಗೂ ಆರ್ ಅಶ್ವಿನ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.