
ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಕಳೆದ ಡಿಸೆಂಬರ್ ಅಂತ್ಯದಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ತನ್ನ ಚೇತರಿಕೆಯ ಬಗ್ಗೆ ಆಗಾಗ ಮಾಹಿತಿಗಳನ್ನು ಅವರೇ ನೀಡುತ್ತಿದ್ದಾರೆ. ಕನಿಷ್ಠ 6 ತಿಂಗಳ ಕಾಲ ಪಂತ್ ಕ್ರಿಕೆಟ್ನಿಂದ ದೂರವುಳಿಯಬೇಕಾಗಬಹುದು ಎನ್ನಲಾಗಿತ್ತು. ಆದರೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ವಹಣಾ ಜವಾಬ್ಧಾರಿ ಹೊತ್ತಿರುವ ಸೌರವ್ ಗಂಗೂಲಿ ಈ ವಿಚಾರವಾಗಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಾರ ಟೀಮ್ ಇಂಡಿಯಾದಲ್ಲಿ ರಿಷಭ್ ಪಂತ್ ಮತ್ತೆ ಆಡಲು ಗರಿಷ್ಠ 2 ವರ್ಷಗಳಾದರೂ ಬೇಕಾಗಬಹುದು ಎಂದಿದ್ದಾರೆ. ಪಿಟಿಐ ಏಜೆನ್ಸಿ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್ ಸ್ಥಾನವನ್ನು ತುಂಬುವುದು ಬಹಳ ಕಷ್ಟ ಎಂದಿದ್ದಾರೆ. ಅಲ್ಲದೆ ಪಂತ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಫ್ರಾಂಚೈಸಿ ಇನ್ನು ಆಯ್ಕೆ ಮಾಡಿಲ್ಲ ಎಂದು ಕೂಡ ಅವರು ವಿವರಿಸಿದ್ದಾರೆ. ರಿಷಭ್ ಪಂತ್ ಭೀಕರ ಅಪಘಾತದಲ್ಲಿ ಗಾಯಕ್ಕೆ ತುತ್ತಾದ ಬಳಿಕ ಅವರೊಂದಿಗೆ ಕಲ ಬಾರಿ ಮಾತನಾಡಿರುದಾಗಿ ಹೇಳಿದ್ದಾರೆ ಸೌರವ್ ಗಂಗೂಲಿ.
"ನಾನು ಆತನ ಜೊತೆಗೆ ಎರಡ್ಮೂರು ಬಾರಿ ಮಾತನಾಡಿದ್ದೇನೆ. ಗಾಯಗಳು ಹಾಗೂ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಖಂಡಿತವಾಗಿಯೂ ಆತ ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆತ ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ. ಇನ್ನು ಒಂದು ವರ್ಷ ಅಥವಾ ಎರಡು ವರ್ಷದ ಅವಧಿಯಲ್ಲಿ ಆತ ಭಾರತ ತಂಡದಲ್ಲಿ ಮತ್ತೆ ಆಡಬಹುದು" ಎಂದಿದ್ದಾರೆ ಸೌರವ್ ಗಂಗೂಲಿ.
ಐಪಿಎಲ್ನಲ್ಲಿ ರಿಷಭ್ ಪಂತ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ನಿರ್ಧರಿಸಲು ಇನ್ನು ಕೆಲ ಸಮಯಗಳು ಬೇಕು ಎಂದಿದ್ದಾರೆ ಸೌರವ್ ಗಂಗೂಲಿ. ಅಭಿಶೇಕ್ ಪೋರೆಲ್ ಹಾಗೂ ಶೆಲ್ಡನ್ ಜಾಕ್ಸನ್ ಮಧ್ಯೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಗೊಂದಲದಲ್ಲಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ನಾಯಕನನ್ನು ಕೂಡ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಡಿಸಿ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದ್ದರೂ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ.
ಇನ್ನು ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಕೊಲ್ಕತ್ತಾದಲ್ಲಿ ಶಿಬಿರ ನಡೆಸಲಿದೆ. ಪೃಥ್ವಿ ಶಾ, ಇಶಾಂತ ಶರ್ಮಾ, ಚೇತನ್ ಸಕಾರಿಯಾ, ಮನೀಶ್ ಪಾಂಡೆ ಮೊದಲಾದ ಆಟಗಾರರು ಈ ಶಿಬಿರದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
"ಐಪಿಎಲ್ ಆರಂಭಕ್ಕೆ ಇನ್ನೂ ತಿಂಗಳ ಸಮಯವಿದೆ. ಆಟಗಾರರೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಆಡುತ್ತಿರುವ ಕಾರಣ ಎಲ್ಲರನ್ನೂ ಶಿಬಿರದಲ್ಲಿ ಒಗ್ಗೂಡಿಸುವುದು ಕಠಿಣ. ನಾಲ್ಕೈದು ಆಟಗಾರರು ಇರಾನಿ ಟ್ರೋಫಿ ಆಡಲಿದ್ದಾರೆ. ಸರ್ಫರಾಜ್ ಬೆರಳಿಗೆ ಗಾಯವಾಗಿದ್ದರೂ ಅದು ತೀವ್ರ ಮಟ್ಟದಾಗಿಲ್ಲವಾಗಿರುವ ಕಾರಣ ಐಪಿಎಲ್ ವೇಳೆಗೆ ಲಭ್ಯವಾಗಲಿದ್ದಾರೆ" ಎಂದಿದ್ದಾರೆ ಸೌರವ್ ಗಂಗೂಲಿ.