
ಕೋಲ್ಕತ್ತಾ, ಮಾರ್ಚ್ 26: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸುಮಾರು 50 ಲಕ್ಷ ರೂ. ಮೌಲ್ಯದ ಅಕ್ಕಿ ದಾನ ಮಾಡಲಿದ್ದಾರೆ. ಕೊರೊನಾ ವೈರಸ್ನಿಂದ ಭಾರತದಲ್ಲಿ ಸುಮಾರು 21 ದಿನಗಳ ನಿಷೇಧ ವಿಧಿಸಲಾಗಿದ್ದು, ಸಂಕಷ್ಟದಲ್ಲಿರುವ ಜನರಿಗೆ ನೆರವೀಯಲು ದಾದಾ ಮುಂದಾಗಿದ್ದಾರೆ.
'ಲಾಕ್ಡೌನ್ ಜಾರಿಯಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಬಡತನದಲ್ಲಿರುವ ಮಂದಿಯನ್ನು ಬೆಂಗಾಲ್ನ ಸರ್ಕಾರಿ ಶಾಲೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇವರಿಗೆ ಲಾಲ್ ಬಾಬಾ ರೈಸ್ ಮಿಲ್ ಮತ್ತು ಸೌರವ್ ಗಂಗೂಲಿ ಅಕ್ಕಿ ನೀಡಲಿದ್ದಾರೆ,' ಎಂದು ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ ಹೇಳಿಕೆಯಲ್ಲಿ ತಿಳಿಸಿದೆ.
'ಗಂಗೂಲಿಯ ಈ ನಡೆಯು ರಾಜ್ಯದ ಇತರ ನಾಗರಿಕರು ನಮ್ಮ ರಾಜ್ಯದ ಜನರಿಗೆ ಇದೇ ರೀತಿಯಲ್ಲಿ ಸಹಾಯ ನೀಡಲು ಇದು ಉತ್ತೇಜನ ನೀಡಲಿದೆ ಎಂದು ನಾವು ಭಾವಿಸುತ್ತೇವೆ,' ಎಂದು ಬೆಂಗಾಲ್ ಕ್ರಿಕೆಟ್ ಸೋಸಿಯೇಶನ್ನ ಮುಂದುವರೆದ ಹೇಳಿಕೆಯಲ್ಲಿ ಬರೆದಿದೆ.
ಭಾರತದಲ್ಲೂ ಆತಂಕಕಾರಿಯಾಗಿ ಹರಡುತ್ತಿರುವ ಕೊರೊನಾ ಸೋಂಕಿಗೆ ಸುಮಾರು 600ಕ್ಕೂ ಹೆಚ್ಚು ಮಂದಿ ತುತ್ತಾಗಿರುವುದು ಖಾತರಿಯಾಗಿದೆ. ಸುಮಾರು 10 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಮಾರಕ ಸೋಂಕಿನ ಭೀತಿಯಿಂದಾಗಿ ಭಾರತದಲ್ಲಿ ನಿಷೇಧಾಜ್ಞೆಯಿದ್ದು, ಕ್ರೀಡಾ ಸ್ಪರ್ಧೆಗಳೆಲ್ಲಾ ರದ್ದಾಗಿವೆ.