ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಜೂನ್ನಲ್ಲಿ 1ರಿಂದ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ನ ಭಾರತ ತಂಡದಲ್ಲಿ ಆಡಲು ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ಸುಮಾರು 14 ತಿಂಗಳುಗಳ ಕಾಲ ಯಾವುದೇ ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳದ ಈ ಇಬ್ಬರು ಆಟಗಾರರು ಕ್ರಿಕೆಟ್ನ ಚುಟುಕು ಸ್ವರೂಪಕ್ಕೆ ತಮ್ಮನ್ನು ತಾವು ಲಭ್ಯವಾಗಿಸಿಕೊಂಡಿದ್ದಾರೆ. ಇದೇ ಜನವರಿ 11ರಿಂದ ಮೊಹಾಲಿಯಲ್ಲಿ ಆರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

"ಖಂಡಿತವಾಗಿಯೂ ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕರಾಗಬೇಕು. ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಇರಬೇಕು. ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ, 14 ತಿಂಗಳ ನಂತರ ಹಿಂತಿರುಗಿದರೂ, ಏನೂ ಆಗುವುದಿಲ್ಲ," ಎಂದು ಸೌರವ್ ಗಂಗೂಲಿ ಭಾನುವಾರದಂದು ಹೇಳಿದರು.
2022ರ ನವೆಂಬರ್ 10ರಂದು ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದ ನಂತರ, ರೋಹಿತ್ ಮತ್ತು ಕೊಹ್ಲಿ ಜೋಡಿ ಟಿ20 ಸ್ವರೂಪದಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ ಎಂಬುದು ಗಮನಾರ್ಹ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅವರು ಔಟಾದ ಬಗ್ಗೆ ಸೌರವ್ ಗಂಗೂಲಿ ನಿರಾಶೆ ವ್ಯಕ್ತಪಡಿಸಿದ್ದು, ಯುವ ಆರಂಭಿಕ ಆಟಗಾರನಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದು ಹೇಳಿದರು.

22 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸೆಂಚುರಿಯನ್ ಮತ್ತು ಕೇಪ್ ಟೌನ್ನ ಸವಾಲಿನ ದಕ್ಷಿಣ ಆಫ್ರಿಕಾದ ಪಿಚ್ಗಳಲ್ಲಿ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೇವಲ 50 ರನ್ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾದರು. ಉಭಯ ತಂಡಗಳು ಸರಣಿಯನ್ನು 1-1 ಅಂತರದಲ್ಲಿ ಹಂಚಿಕೊಂಡವು.
"ಯಶಸ್ವಿ ಜೈಸ್ವಾಲ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ. ಇದು ಆತನ ವೃತ್ತಿಜೀವನದ ಆರಂಭವಾಗಿದೆ. ಆತ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ," ಎಂದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಿಳಿಸಿದರು.
ಸೆಂಚುರಿಯನ್ನಲ್ಲಿ ಇನ್ನಿಂಗ್ಸ್ ಮತ್ತು 32 ರನ್ಗಳ ಸೋಲಿನ ನಂತರ, ಭಾರತ ತಂಡವು ಕೇಪ್ ಟೌನ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಲು ಪ್ರಬಲವಾದ ಪುನರಾಗಮನ ಮಾಡಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಟೆಸ್ಟ್ ಪಂದ್ಯವಾಗಿತ್ತು.
"ಒಂದು ಪಂದ್ಯವನ್ನು ಸೋತ ನಂತರ ಜನರು ಬಹಳಷ್ಟು ವಿಚಾರಗಳನ್ನು ಹೇಳುತ್ತಾರೆ. ಭಾರತ ಬಲಿಷ್ಠ ತಂಡದಿಂದ ಕೂಡಿದೆ. ಇಡೀ ಪ್ರವಾಸದಲ್ಲಿ ಅವರು ಆಡಿದ ರೀತಿ ನೋಡಿ, ಏಕದಿನ ಸರಣಿಯನ್ನು ಗೆದ್ದರು, ಟೆಸ್ಟ್ ಮತ್ತು ಟಿ20 ಎರಡನ್ನೂ ಡ್ರಾ ಮಾಡಿಕೊಂಡರು," ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದರು.