2024ರ ಇಂಡಿಯನ್ ಪ್ರೀಮಿಯರ್ ಲೀಗ್ ((ಐಪಿಎಲ್) ಪಂದ್ಯಾವಳಿಗಾಗಿ ಇತ್ತೀಚಿಗೆ ದುಬೈನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ನ ಕೆಲವು ಕಚ್ಚಾ ಪ್ರತಿಭೆಗಳನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿತು. ಏಕೆಂದರೆ ಎಲ್ಲಾ ಹತ್ತು ಫ್ರಾಂಚೈಸಿಗಳು ಭವಿಷ್ಯದ ತಾರೆಗಳಿಗಾಗಿ ದೊಡ್ಡ ಬಿಡ್ಗಳೊಂದಿಗೆ ಪೈಪೋಟಿ ನಡೆಸಿದರು.
ಬಿಡ್ಡಿಂಗ್ ಪೈಪೋಟಿಯಲ್ಲಿ ಮುಂಚೂಣಿಗೆ ಬಂದ ಒಂದು ಹೆಸರೆಂದರೆ, ವಿಕೆಟ್-ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರಾ. ಆತನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 7.20 ಕೋಟಿ ರೂಪಾಯಿಗೆ ಖರೀದಿಸಿ ಅಚ್ಚರಿ ಮೂಡಿಸಿತು.

ವಿಕೆಟ್ ಕೀಪಿಂಗ್ ಸೇವೆಗಳಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಫ್ರಾಂಚೈಸಿಗಳ ಪೈಪೋಟಿಯನ್ನು ಹಿಂದಿಕ್ಕಿತು.
ತನ್ನ ಮಗ ದೊಡ್ಡ ಮೊತ್ತದ ಒಪ್ಪಂದಕ್ಕೆ ಇಳಿಯುವುದನ್ನು ನೋಡಿದ ಬಳಿಕ, ಕುಮಾರ್ ಕುಶಾಗ್ರಾ ಅವರ ತಂದೆ ಪ್ರತಿಕ್ರಿಯಿಸಿದ್ದಾರೆ ಮತ್ತು ಯುವ ವಿಕೆಟ್ ಕೀಪರ್-ಬ್ಯಾಟರ್ ಆಟವನ್ನು ನೋಡಿದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಸೌರವ್ ಗಂಗೂಲಿ ತನ್ನ ಮಗನಿಗೆ ನೀಡಿದ ಭರವಸೆಯನ್ನು ಬಹಿರಂಗಪಡಿಸಿದ್ದಾರೆ.
"ಈಡನ್ ಗಾರ್ಡನ್ಸ್ನಲ್ಲಿನ ಪ್ರಯೋಗಗಳ ನಂತರ, ಸೌರವ್ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿಸುವುದಾಗಿ ಕುಮಾರ್ ಕುಶಾಗ್ರಾಗೆ ಹೇಳಿದ್ದರು ಮತ್ತು ಆತನಿಗಾಗಿ ಫ್ರಾಂಚೈಸಿ 10 ಕೋಟಿ ರೂಪಾಯಿಗಳವರೆಗೆ ಬಿಡ್ ಮಾಡಲಿದೆ ಎಂದು ಭರವಸೆ ನೀಡಿದ್ದರು," ಎಂದು ಕುಮಾರ್ ಕುಶಾಗ್ರಾ ಅವರ ತಂದೆ ಶಶಿಕಾಂತ್ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
"ಆಯ್ಕೆ ಟ್ರಯಲ್ಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಸೌರವ್ ಗಂಗೂಲಿ ಅವರು ಕುಮಾರ್ ಕುಶಾಗ್ರಾನ ಸಿಕ್ಸ್ ಬಾರಿಸುವ ಸಾಮರ್ಥ್ಯ ಮತ್ತು ಮೈದಾನದಲ್ಲಿ ಆಡುವ ಶೈಲಿಯಿಂದ ಪ್ರಭಾವಿತರಾದರು. ಅಲ್ಲದೆ ಆತನ ಕೀಪಿಂಗ್ ಕೌಶಲ್ಯವು ಸೌರವ್ ಗಂಗೂಲಿಯನ್ನು ಮೆಚ್ಚಿಸಿತು. ಕುಮಾರ್ ಬೇಲ್ಸ್ ಹಾರಿಸುವಾಗ ಅವನಲ್ಲಿ ಎಂಎಸ್ ಧೋನಿಯನ್ನು ಸ್ವಲ್ಪಮಟ್ಟಿಗೆ ಕಂಡುಕೊಂಡರು," ಎಂದು ಹೇಳಿದರು.
20 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಅನ್ಕ್ಯಾಪ್ಡ್ ಭಾರತೀಯ ಯುವ ಕ್ರಿಕೆಟಿಗ ಕುಮಾರ್ ಕುಶಾಗ್ರಾ ಆಟವನ್ನು ನೋಡಿ, ಎಂಎಸ್ ಧೋನಿಯನ್ನು ನೆನಪಿಸಿಕೊಂಡ ಸೌರವ್ ಗಂಗೂಲಿ ಅವರ ಮೇಲೆ ಶಾಶ್ವತ ಪ್ರಭಾವ ಬೀರಿದ್ದರು. ಆದರೆ, ಮಾಜಿ ಕ್ರಿಕೆಟಿಗನ ಭರವಸೆಯ ಹೊರತಾಗಿಯೂ ತನ್ನ ಮಗ ಮೂಲ ಬೆಲೆಗೆ ಮಾತ್ರ ಹೋಗಬಹುದು ಎಂದು ಕುಮಾರ್ ಕುಶಾಗ್ರಾ ತಂದೆ ಶಶಿಕಾಂತ್ ಭಾವಿಸಿದ್ದರು.
"ಕುಮಾರ್ ಕುಶಾಗ್ರಾ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ಗೆ ಆಯ್ಕೆಯಾಗುತ್ತಾನೆ ಎಂದು ನಾನು ಭಾವಿಸಿದ್ದೆ. ಕೆಲವು ಕ್ಷಣಗಳವರೆಗೆ ನಾನು ತುಂಬಾ ಮೌನವಾಗಿದ್ದೆ. ಪವಾಡಗಳ ಬಗ್ಗೆ ಮಾತ್ರ ಯೋಚಿಸಬಹುದು ಮತ್ತು ಅಂದು ಅಂತಹ ದಿನವಾಗಿತ್ತು. ಗಂಗೂಲಿ ಆತನಿಗೆ ಭರವಸೆ ನೀಡಿದ್ದರಿಂದ ಕುಮಾರ್ ಆತ್ಮವಿಶ್ವಾಸದಲ್ಲಿದ್ದ. ಆದರೆ ಅವನನ್ನು ಪ್ರೋತ್ಸಾಹಿಸಲು ಗಂಗೂಲಿ ಈ ರೀತಿ ಹೇಳಿರಬೇಕು ಎಂದು ನಾನು ಭಾವಿಸಿದೆ," ಎಂದು ಶಶಿಕಾಂತ್ ತಿಳಿಸಿದರು.
"ನಾನು ಯಾವುದೇ ಮಟ್ಟದಲ್ಲಿ ಕ್ರಿಕೆಟ್ ಆಡಿರಲಿಲ್ಲ. ನಾನು ಕೇವಲ ಕ್ರಿಕೆಟ್ನ ಅನುಯಾಯಿಯಾಗಿದ್ದೆ. ಕುಮಾರ್ ಐದು ವರ್ಷದವನಾಗಿದ್ದಾಗ ಮತ್ತು ಕ್ರಿಕೆಟ್ನಲ್ಲಿ ಆಸಕ್ತಿ ತೋರಿಸಲು ಪ್ರಾರಂಭಿಸಿದಾಗ, ನಾನು ಅವನಿಗೆ ತರಬೇತಿ ನೀಡಲು ನಿರ್ಧರಿಸಿದೆ''.
"ನನ್ನ ಸಹೋದ್ಯೋಗಿಯೊಬ್ಬರು ಬಾಬ್ ವೂಲ್ಮರ್ ಅವರ ಆರ್ಟ್ ಅಂಡ್ ಸೈನ್ಸ್ ಆಫ್ ಕ್ರಿಕೆಟ್ ಎಂಬ ಪುಸ್ತಕವನ್ನು ಸೂಚಿಸಿದರು. ಆ ಪುಸ್ತಕವನ್ನು ನಾಲ್ಕೈದು ಬಾರಿ ನಾನು ಓದಿದೆ. ಆ ಪುಸ್ತಕ ನನ್ನ ಕೋಚ್ ಆಯಿತು ಮತ್ತು ನಾನು ಕುಮಾರ್ ಕುಶಾಗ್ರಾಗೆ ತರಬೇತಿ ಪ್ರಾರಂಭಿಸಿದೆ," ಎಂದು ಶಶಿಕಾಂತ್ ನೆನಪಿಸಿಕೊಂಡರು.