
ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಕೆಳಗಿಳಿದ ನಂತರ ಅವರ ಸ್ಥಾನಕ್ಕೆ ಕನ್ನಡಿಗ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೌರವ್ ಗಂಗೂಲಿ ಅವರನ್ನು ಐಸಿಸಿ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿತ್ತು, ಆದರೆ ಅದು ಹುಸಿಯಾಗಿದೆ.
ಇನ್ನು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಚುನಾವಣೆಗೆ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಸಿಎಬಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಕೈಗೊಂಡಿದ್ದಾರೆ.
ಬದಲಾಗಿ ಸೌರವ್ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಾಶಿಶ್ ಅವರು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ನೂತನ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರಾವಧಿಯು ಇತ್ತೀಚಿಗೆ ಕೊನೆಗೊಂಡಿತು, ಬಿಸಿಸಿಐ ಉನ್ನತ ಹುದ್ದೆಗೆ ಬರುವ ಮೊದಲು 2015ರಿಂದ 2019ರ ನಡುವೆ ನಾಲ್ಕು ವರ್ಷಗಳ ಕಾಲ ಸಿಎಬಿ ಅಧ್ಯಕ್ಷರಾಗಿದ್ದರು.

"ಚುನಾವಣೆ ವೇಳೆ ನಾನು ಸ್ಪರ್ಧಿಸುತ್ತೇನೆ ಎಂದು ನಾನು ಹೇಳಿದ್ದೆ. ಇದೀಗ ಯಾವುದೇ ಚುನಾವಣೆ ನಡೆಯುವುದಿಲ್ಲ, ಆದ್ದರಿಂದ ಅದು ಅವಿರೋಧವಾಗಿ ನಡೆಯಲಿದೆ," ಎಂದು ಸೌರವ್ ಗಂಗೂಲಿ ಈಡನ್ ಗಾರ್ಡನ್ನಲ್ಲಿ ನಾಮನಿರ್ದೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
"ನಾನು ಸ್ಪರ್ಧೆಯಲ್ಲಿದ್ದರೆ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಯಾವುದೇ ಹುದ್ದೆಗಳು ಸಿಗುವುದಿಲ್ಲ ಎಂದರ್ಥ. ಹಾಗಾಗಿ ನಾನು ಹಿಂದಕ್ಕೆ ಸರಿದಿದ್ದೇನೆ. ನಾನು ಸ್ಪರ್ಧೆ ಮಾಡಿದ್ದರೆ ನಾನು ಅವಿರೋಧವಾಗಿ ಆಯ್ಕೆಯಾಗುತ್ತೇನೆ, ಆದರೆ ಅದು ಸರಿ ಎಂದು ನಾನು ಭಾವಿಸುವುದಿಲ್ಲ. ಇತರರಿಗೆ ಅವಕಾಶ ಸಿಗುತ್ತಿರಲಿಲ್ಲ. ಈ ಅಸೋಸಿಯೇಷನ್ಗಾಗಿ ಕೆಲಸ ಮಾಡುವ ಅವಕಾಶ ನನಗೆ ಈಗಾಗಲೇ ಸಿಕ್ಕಿದೆ. ಸ್ನೇಹಾಶಿಶ್ ಈಗ ಈ ಮೂರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ನಂತರ ನಾವು ನೋಡುತ್ತೇವೆ," ಎಂದರು.
ಅವರ ಮುಂದಿನ ಇನ್ನಿಂಗ್ಸ್ ಬಗ್ಗೆ ಕೇಳಿದಾಗ, ಸೌರವ್ ಗಂಗೂಲಿ ಹೇಳಿದ್ದು ಹೀಗೆ, "ನೋಡೋಣ. ನಾನು ಈಗ ಸ್ವಲ್ಪ ಸಮಯದವರೆಗೆ ಜವಾಬ್ದಾರಿಯಿಂದ ಮುಕ್ತನಾಗಿದ್ದೇನೆ ಮತ್ತು ಅದರ ಬಗ್ಗೆ ನನಗೆ ಸಂತೋಷವಾಗಿದೆ. CAB ನಲ್ಲಿ ನನಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ, ಇಲ್ಲಿ ಎಲ್ಲರೂ ನನ್ನ ಸ್ನೇಹಿತರು. ಹೊಸಬರು ಮತ್ತು ಅನುಭವಿಗಳಿದ್ದಾರೆ. ಪಂದ್ಯವನ್ನು ನಡೆಸಲು ಇಲ್ಲಿರುವ ಜನರು, ನಾನು ಸಹ ಸುತ್ತಲೂ ಇರುತ್ತೇನೆ ಮತ್ತು ಅವರು ಯಾವಾಗಲೂ ನನ್ನ ಸಂಪರ್ಕದಲ್ಲಿರುತ್ತಾರೆ," ಎಂದು ಅವರು ಈಡನ್ನಿಂದ ಹೊರಡುವ ಮೊದಲು ಹೇಳಿದರು.
ಸೌರವ್ ಗಂಗೂಲಿ ಶನಿವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿತ್ತು, ಆದರೆ ಭಾನುವಾರದ ವೇಳೆಗೆ ಪರಿಸ್ಥಿತಿ ತಿಳಿಯಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಯಾವಾಗ ನಾಮಪತ್ರ ಸಲ್ಲಿಸುತ್ತೀರಿ ಎಂಬ ಪ್ರಶ್ನೆಗೆ, ನಾಳೆಯವರೆಗೆ ಕಾಯೋಣ, ಎಲ್ಲವೂ ಸ್ಪಷ್ಟವಾಗುತ್ತದೆ ಎಂದಿದ್ದರು. ಭಾನುವಾರ ನಾಮಪತ್ರ ಸಲ್ಲಿಕೆಗೆ ಗಡುವು ಮುಗಿದ ಬಳಿಕ ಸವರವ್ ಗಂಗೂಲಿ ಸ್ಪರ್ಧಿಸುತ್ತಿಲ್ಲ ಎಂಬುದು ಸ್ಪಷ್ಟವಾಯಿತು.