
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿಹೆಚ್ಚು ವಿವಾದಕ್ಕೊಳಗಾಗಿರುವ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ಹೌದು, ಇತ್ತೀಚೆಗಷ್ಟೇ ಮುಕ್ತಾಯವಾದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋಲುವುದರ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಚೊಚ್ಚಲ ಬಾರಿಗೆ ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಿದ ಬೇಡವಾದ ದಾಖಲೆ ಬರೆಯಿತು. ಈ ಮೂಲಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಸೋತ ಭಾರತದ ಏಕೈಕ ನಾಯಕ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋಲುವುದು ಮಾತ್ರವಲ್ಲದೇ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಮೂಲಕ ವಿರಾಟ್ ಮುಂದಾಳತ್ವದ ಟೀಮ್ ಇಂಡಿಯಾ ಮುಖಭಂಗಕ್ಕೆ ಒಳಗಾಯಿತು. ಹೀಗೆ ಈ ವರ್ಷ ನಡೆದ ಎರಡನೇ ಐಸಿಸಿ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ವಿಫಲತೆಯನ್ನು ಕಂಡಿತು. ಹೌದು, ಈ ವರ್ಷ ಮೊದಲಿಗೆ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೋಲುವುದರ ಮೂಲಕ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು.
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಮುಗ್ಗರಿಸಿದ್ದ ಟೀಮ್ ಇಂಡಿಯಾ ಈ ವರ್ಷ ನಡೆದ ಎರಡೆರಡು ಐಸಿಸಿ ಟೂರ್ನಿಗಳಲ್ಲಿ ಕೂಡ ಟ್ರೋಫಿ ಗೆಲ್ಲಲಾಗದೆ ತನ್ನ ಓಟವನ್ನು ಅಂತ್ಯಗೊಳಿಸಿತ್ತು. ಹೀಗೆ ಕೊಹ್ಲಿ ನಾಯಕತ್ವದಲ್ಲಿ ಆಡಿದ ಇತ್ತೀಚೆಗಿನ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿ ಟ್ರೋಫಿ ಗೆಲ್ಲಲಾಗದೇ ಇರುವುದು ಸದ್ಯ ವಿರಾಟ್ ಕೊಹ್ಲಿಗೆ ಇರುವ ಬಹುದೊಡ್ಡ ಮೈನಸ್ ಪಾಯಿಂಟ್ ಎಂದೇ ಹೇಳಬಹುದು. ಈ ವಿಷಯವನ್ನು ಸ್ವತಃ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ತಾವು ಭಾಗವಹಿಸಿದ್ದ ಮಾಧ್ಯಮಗೋಷ್ಠಿಯಲ್ಲಿಯೂ ಕೂಡ ಮಾತನಾಡಿ 'ನನ್ನನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕುತ್ತಿರುವುದಾಗಿ ಬಿಸಿಸಿಐ ಅಧಿಕಾರಿಗಳು ತಿಳಿಸಿದರು. ಬಹುಶಃ ನನ್ನ ನಾಯಕತ್ವದಲ್ಲಿ ಐಸಿಸಿ ಟ್ರೋಫಿಯನ್ನು ಗೆಲ್ಲಲಾಗದೇ ಇರುವುದರಿಂದ ಈ ನಿರ್ಧಾರವನ್ನು ಕೈಗೊಂಡರು ಎಂದೆನಿಸುತ್ತದೆ. ಆದರೂ ಸಹ ಇದಕ್ಕೆ ನಾನು ಸಮ್ಮತಿಯನ್ನು ಯಾವುದೇ ವಿರೋಧ ವ್ಯಕ್ತಪಡಿಸದೆ ಸೂಚಿಸಿದೆ' ಎಂದು ಹೇಳಿಕೆಯನ್ನು ನೀಡಿದರು.
ಹೀಗೆ ತನ್ನ ನಾಯಕತ್ವದಲ್ಲಿ ಐಸಿಸಿ ಟ್ರೋಫಿಯನ್ನು ಗೆಲ್ಲಲಾಗಲಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ ಇದೇ ಮಾಧ್ಯಮಗೋಷ್ಠಿಯಲ್ಲಿ ಬಿಸಿಸಿಐ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿದಾಗ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಭಾರತ ಏಕದಿನ ನಾಯಕತ್ವದಿಂದ ಹೊರ ತಳ್ಳಲ್ಪಟ್ಟಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದು ಈ ಸರಣಿ ಮೇಲೆ ಭಾರೀ ನಿರೀಕ್ಷೆ ಇವೆ.
ಹೌದು, ಭಾರತ ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಗಳನ್ನು ಆಡಿದ್ದು ಯಾವುದೇ ಸರಣಿಯಲ್ಲಿಯೂ ಕೂಡಾ ಗೆದ್ದಿಲ್ಲ. ಕಳೆದ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪ್ರವಾಸ ಕೈಗೊಂಡಿದ್ದಾಗಲೂ ಸಹ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ 1-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಹೀಗಾಗಿ ಎಂಟನೇ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ ಈ ಸರಣಿಯಲ್ಲಿ ಗೆಲ್ಲುವುದರ ಮೂಲಕ ತನ್ನ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಬೇಕಿದೆ.
ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಜಯ ಸಾಧಿಸಿ ನೂತನ ದಾಖಲೆ ಬರೆಯುವುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕೂಡ ಮಾತನಾಡಿದ್ದು ವಿರಾಟ್ ಕೊಹ್ಲಿ ತನ್ನ ಸಾಮರ್ಥ್ಯವನ್ನು ತಾನು ನಿರೂಪಿಸಿಕೊಳ್ಳಲು ಇದು ಅಂತಿಮ ಅವಕಾಶ ಎಂದಿದ್ದಾರೆ. "ವಿರಾಟ್ ಕೊಹ್ಲಿಗೆ ಇದು ಅತಿದೊಡ್ಡ ಪ್ರವಾಸ, ಏಕೆಂದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಇದುವರೆಗೂ ಕೂಡ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನೆಲದಲ್ಲಿ ಜಯ ಗಳಿಸಿರುವ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಜಯ ಸಾಧಿಸಬೇಕಿದೆ. ವಿರಾಟ್ ಕೊಹ್ಲಿ ನಾಯಕನಾಗಿ ತನ್ನ ಸಾಮರ್ಥ್ಯವನ್ನು ನಿರೂಪಿಸಿಕೊಳ್ಳಲು ಇದು ಅಂತಿಮ ಅವಕಾಶವಾಗಿದೆ. ಈ ಸರಣಿಯಲ್ಲಿ ಉತ್ತಮ ರನ್ ಕಲೆ ಹಾಕುವುದರ ಮೂಲಕ ತನ್ನ ತಂಡವನ್ನು ಗೆಲ್ಲಿಸಿ ಇತ್ತೀಚೆಗಷ್ಟೇ ಏಕದಿನ ನಾಯಕತ್ವದಿಂದ ಹೊರಹಾಕಿರುವ ಬಿಸಿಸಿಐಗೆ ತಾನು ಏನು ಎಂಬುದನ್ನು ತೋರಿಸಬೇಕಿದೆ" ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.