
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದೆ. ಆದರೆ ಮೊದಲ ಸೆಶನ್ನಲ್ಲಿ ಟೀಮ್ ಇಂಡಿಯಾ ಭಾರೀ ಆಘಾತವನ್ನು ಅನುಭವಿಸಿದೆ. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ನೇತೃತ್ವದಲ್ಲಿ ಕಣಕ್ಕಿಳಿದ ಭಾರತೀಯ ತಂಡ ಆರಂಭಿಕ ಆಘಾತವನ್ನು ಅನುಭವಿಸಿದೆ. ಅದರಲ್ಲೂ ಪದೇ ಪದೇ ವಿಫಲವಾಗಿ ಭಾರೀ ಟೀಕೆಗೆ ಒಳಗಾದ ನಂತರವೂ ಮತ್ತೆ ಮತ್ತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಮತ್ತೊಂದು ಪಂದ್ಯದಲ್ಲಿಯೂ ಭಾರೀ ನಿರಾಸೆ ಮೂಡಿಸಿದ್ದಾರೆ.
ಜೋಹನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತವನ್ನು ಅನುಭವಿಸಿದೆ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 26 ರನ್ಗಳಿಗೆ ವಿಕೆಟ್ ಕಳೆದುಕೊಂಡ ನಂತರ ಕಣಕ್ಕಿಳಿದ ಚೇತೇಶ್ವರ್ ಪೂಜಾರ 33 ಎಸೆತಗಳನ್ನು ಎದುರಿಸಿ 3 ರನ್ಗಳಿಗೆ ವಿಕೆಟ್ ಕಳೆದುಕೊಂಡರೆ ನಂತರ ಬ್ಯಾಟಿಂಗ್ಗೆ ಇಳಿದ ಅಜಿಂಕ್ಯಾ ರಹಾನೆ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಈ ಆಟಗಾರರ ವೈಫಲ್ಯ ಮತ್ತೊಂದು ಪಂದ್ಯದಲ್ಲಿಯೂ ಮುಂದುವರಿದಿದೆ.
ಈ ಇಬ್ಬರು ಆಟಗಾರರು ಕೂಡ ಕಳೆದ ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಈ ಎರಡು ವರ್ಷದ ಅವಧಿಯಲ್ಲಿ ಪೂಜಾರ 20.37 ಹಾಗೂ 30.42ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರೆ ರಹಾನೆ 38.82 ಹಾಗೂ 19.57ರ ಸರಾಸರಿಯಲ್ಲಿ ಕ್ರಮವಾಗಿ 2020 ಹಾಗೂ 2021ರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2019ರ ಅಕ್ಟೋಬರ್ ಬಳಿಕ ರಹಾನೆ ಕೇವಲ ಒಂದು ಶತಕವನ್ನು ಮಾತ್ರವೇ ಗಳಿಸಿದ್ದು ಅವರ ಒಟ್ಟಾರೆ ಟೆಸ್ಟ್ ಸರಾಸರಿ 40ಕ್ಕಿಂತ ಕೆಳಕ್ಕೆ ಇಳಿದಿದೆ. ಇನ್ನು ಪೂಜಾರ 2019ರ ಜನವರಿ ತಿಂಗಳ ಬಳಿಕ ಶತಕ ಸಿಡಿಸಲು ವಿಫಲವಾಗಿದ್ದಾರೆ.
ಇನ್ನು ಈ ಇಬ್ಬರು ಅನುಭವಿ ಆಟಗಾರರು ಜೊಹನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿಯೂ ಕಳಪೆ ಪ್ರದರ್ಶನ ನಿಡಿದ ಬಳಿಕ ಅಭಿಮಾನಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಈ ಪೈಕಿ ಓರ್ವ ಅಭಿಮಾನಿ ರಹಾನೆ ಹಾಘೂ ಚೇತೇಶ್ವರ್ ಪೂಜಾರ ಇನ್ನೂ ಎಷ್ಟು ಪಂದ್ಯಗಳಲ್ಲಿ ಅವಕಾಶವನ್ನು ಪಡೆಯುತ್ತಾರೆ ಎಂದು ಹತಾಶೆಯಿಂದ ಟ್ವೀಟ್ ಮಾಡಿದ್ದಾರೆ. ಮತ್ತೊರ್ವ ಅಭಿಮಾನಿ ಭಾರತ ತಂಡದ ಈ ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡಲು ತಂಡದ ಮ್ಯಾನೇಜ್ಮೆಂಟ್ಗೆ ಅತ್ಯಂತ ಪ್ರಶಸ್ತವಾದ ಸಮಯ ಇದಾಗಿದ್ದು ಯುವ ಆಟಗಾರರಿಗೆ ಅವಕಾಶವನ್ನು ನೀಡಬೇಕು ಎಂದಿದ್ದಾರೆ. ಭಾರತೀಯ ತಂಡದ ಸಾಕಷ್ಟು ಅಭಿಮಾನಿಗಳು ಈ ಇಬ್ಬರು ಆಟಗಾರರ ಬದಲಿಗೆ ಶ್ರೇಯಸ್ ಐಯ್ಯರ್ಗೆ ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ನಾಯಕ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ(ಡಬ್ಲ್ಯೂ), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್ಗಿಡಿ