ಜುಲೈ 4 ಗುರುವಾರ, ಟಿ20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾ ಟ್ರೋಫಿ ಗೆದ್ದ ಐದು ದಿನಗಳ ನಂತರ ಇಂದು ಬೆಳಗ್ಗೆ 6 ಗಂಟೆಗೆ ಬಾರ್ಬಡೋಸ್ನಿಂದ ದೆಹಲಿಯ ಟಿ3 ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ದೆಹಲಿಯಲ್ಲಿ ಟೀಮ್ ಇಂಡಿಯಾಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ನವದೆಹಲಿಯ ಮೌರ್ಯ ಹೋಟೆಲ್ ಎದುರು ಭಾರತ ತಂಡದ ಆಟಗಾರರು ಭರ್ಜರಿ ಭಾಂಗ್ರಾ ನೃತ್ಯ ಮಾಡಿದರು. ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಕೇಕ್ ಕತ್ತರಿಸಿದರು.

ಸದ್ಯ ಭಾರತ ತಂಡ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಟೀಮ್ ಇಂಡಿಯಾ ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ಮುಂಬೈ ತಲುಪಲಿದ್ದಾರೆ.
ಮುಂಬೈ ತಲುಪಿದ ಬಳಿಕ ಆಟಗಾರರು ವಿಶೇಷವಾಗಿ ಸಿಂಗಾರಗೊಂಡಿರುವ ತೆರೆದ ಬಸ್ನಲ್ಲಿ ವಾಂಖೆಡೆ ಸ್ಟೇಡಿಯಂ ತಲುಪಲಿದ್ದಾರೆ. ಸಂಜೆ 5 ಗಂಟೆಗೆ ಮರೈನ್ ಡ್ರೈವ್ನಿಂದ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್ನಲ್ಲಿ ಟ್ರೋಫಿಯೊಂದಿಗೆ ಪರೇಡ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಭಾಗವಹಿಸಲಿದ್ದಾರೆ. ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಟೀಮ್ ಇಂಡಿಯಾ ವಿಜಯೋತ್ಸವ ಮೆರವಣಿಗೆಯನ್ನು ನಾರಿಮನ್ ಪಾಯಿಂಟ್ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಸಂಜೆ 5 ರಿಂದ 7 ಗಂಟೆಯವರೆಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಾರಿಮನ್ ಪಾಯಿಂಟ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವಿನ ಮರೈನ್ ಡ್ರೈವ್ನಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ನೀಲಿ ಬಣ್ಣದ ಮೆರವಣಿಗೆ ಬಸ್ನಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದ ಸಂಭ್ರಮದ ಫೋಟೋವನ್ನು ಹಾಕಲಾಗಿದೆ. ಆಟಗಾರರು ತೆರೆದ ಬಸ್ ಮೇಲೆ ನಿಲ್ಲಲು ವವ್ಯಸ್ಥೆ ಮಾಡಲಾಗಿದೆ.
ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಈಗಾಗಲೇ ಬಿಸಿಸಿಐ 125 ಕೋಟಿ ರೂ.. ಬಹುಮಾನ ಘೋಷಿಸಿದೆ. ಶನಿವಾರ, ಜೂನ್ 29 ರಂದು, ಭಾರತ ತಂಡವು ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಈ ಮೂಲಕ ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆ ಕೊನೆಗೊಂಡಿತ್ತು. ಭಾರತ ಈ ಹಿಂದೆ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.