ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಣ ರಣಜಿ ಟೂರ್ನಿ ಸಿ ಗುಂಪಿ ಪಂದ್ಯದಲ್ಲಿ ಮಯಾಂಕ್ ಪಡೆ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಭರವಸೆಯ ಆಟಗಾರ ಕೃಷ್ಣಾ ಶ್ರೀಜೇತ್ ಅವರ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ಇನಿಂಗ್ಸ್ ಮುನ್ನಡೆ ಹೆಚ್ಚಿಸಿಕೊಂಡಿದೆ. ಈ ಮುನ್ನಡೆ ಹೆಚ್ಚಿಸಲು ಕೆಳ ಕ್ರಮಾಂಕದ ಆಟಗಾರರು ಸಹ ನೆರವು ನೀಡಿದರು. ಪರಿಣಾಮ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 275 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡ ಒಂದು ವಿಕೆಟ್ ನಷ್ಟಕ್ಕೆ 78 ರನ್ಗಳಿಸಿದ್ದು, ಇನ್ನು 108 ರನ್ಗಳ ಇನಿಂಗ್ಸ್ ಹಿನ್ನಡೆ ಅನುಭವಿಸುತ್ತಿದೆ.
ಗುರುವಾರ ದಿನದಾಟವನ್ನು ಕರ್ನಾಟಕ 5 ವಿಕೆಟ್ಗೆ 127 ರನ್ಗಳಿಂದ ಮುಂದುವರಿಸಿ 275 ರನ್ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಉತ್ತರ ಪ್ರದೇಶ ಗುರುವಾರ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ. ಶುಕ್ರವಾರ ಮಾಧವ್ ಕೌಶಿಕ್ (ಅಜೇಯ 33 ರನ್) ಹಾಗೂ ಆರ್ಯನ್ ಜೆ. (ಅಜೇಯ 35 ರನ್) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗುರುವಾರ ದಿನದಾಟವನ್ನು 14 ರನ್ಗಳಿಂದ ಮುಂದುವರೆಸಿದ ಶ್ರೇಯಸ್ ಗೋಪಾಲ್ ಒಂದು ರನ್ ಸೇರಿಸಿ ಔಟ್ ಆದರು. ಏಳನೇ ವಿಕೆಟ್ಗೆ ಕೆ. ಶ್ರೀಜೇತ್ ಹಾಗೂ ಯಶೋವರ್ಧನ್ ಪ್ರತಾಪ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಅರ್ಧ ಶತಕದ ಜೊತೆಯಾಟದ ಕಾಣಿಕೆ ನೀಡಿತು. ಕೃಷ್ಣಾ ಶ್ರೀಜೇತ್ 153 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 110 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಎಂಟನೇ ವಿಕೆಟ್ಗೂ ರಾಜ್ಯದ ಆಟಗಾರರು ಸೊಗಸಾದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ವಿದ್ಯಾಧರ್ ಪಾಟೀಲ್ ಹಾಗೂ ಯಶೋವರ್ಧನ್ ಪ್ರತಾಪ್ ಜೊತೆಗೂಡಿ 51 ರನ್ ಸೇರಿಸಿ ಇನಿಂಗ್ಸ್ ಮುನ್ನಡೆ ವೃದ್ಧಿಸಿದರು. ವಿದ್ಯಾಧರ್ ಪಾಟೀಲ್ 38 ರನ್ಗಳಿಗೆ ಆಟ ಮುಗಿಸಿದರು. ಯಶೋವರ್ಧನ್ ಪ್ರತಾಪ್ 5 ಬೌಂಡರಿ ನೆರವಿನಿಂದ 55 ರನ್ ಸಿಡಿಸಿ ಔಟ್ ಆದರು. ಕೆಳ ಕ್ರಮಾಂಕದ ಇಬ್ಬರೂ ಬ್ಯಾಟರ್ಗಳು ಸಹ ಸೊನ್ನೆ ಸುತ್ತಿದರು.
ಉತ್ತರ ಪ್ರದೇಶ ಪರ ಶಿವಂ ಮಾವಿ ಹಾಗೂ ಆಕ್ಯೂಬ್ ಖಾನ್ ತಲಾ ಮೂರು ವಿಕೆಟ್ ಪಡೆದರು. ವಿಪ್ರಜ್ ಎರಡು ಉರುಳಿಸಿ ಕರ್ನಾಟಕ ಬ್ಯಾಟರ್ಗಳನ್ನು ಕಾಡಿದರು.
186 ರನ್ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡ ಕಳಪೆ ಆರಂಭವನ್ನು ಕಂಡಿತು. ಆರಂಭಿಕ ಅಭಿಷೇಕ್ ಗೋಸ್ವಾಮಿ ಅವರಿಗೆ ವಿದ್ಯಾಧರ್ ಪಾಟೀಲ್ ಖೆಡ್ಡಾ ತೋಡಿದರು. ಎರಡನೇ ವಿಕೆಟ್ಗೆ ಮಾಧವ್ ಕೌಶಿಕ್ ಹಾಗೂ ಆರ್ಯನ್ ಜುಯಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಅಜೇಯ 70 ರನ್ಗಳ ಜೊತೆಯಾಟವನ್ನು ನೀಡಿತು.
ಉತ್ತರ ಪ್ರದೇಶ ತಂಡ ಇನ್ನು 108 ರನ್ಗಳ ಹಿನ್ನಡೆ ಅನುಭವಸಿತ್ತಿದ್ದು, ಕರ್ನಾಟಕ ಎರಡನೇ ಇನಿಂಗ್ಸ್ನಲ್ಲಿ ಎದುರಾಳಿ ತಂಡವನ್ನು ಬಹು ಬೇಗ ಕಟ್ಟಿ ಹಾಕುವ ಪ್ಲ್ಯಾನ್ ಮಾಡಿಕೊಂಡಿದೆ.