
ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಪ್ರಮುಖ ಆಟಗಾರರ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ. ಕ್ರಿಕೆಟ್ ಬೋರ್ಡ್ ಆಟಗಾರರಿಗೆ ನೀಡಿರುವ ವೇತನ ಒಪ್ಪಂದದ ಆಫರ್ ಸರಿಯಿಲ್ಲ ಎಂದಿರುವ ಕೆಲ ಆಟಗಾರರು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಲಂಕಾ ಕ್ರಿಕೆಟ್ ಬೋರ್ಡ್ ನಾಲ್ಕು ವಿಭಾಗಗಳಲ್ಲಿ ಅಂಕಗಳನ್ನು ಹಂಚಿ ನೂತನ ಒಪ್ಪಂದದ ಪಟ್ಟಿಯನ್ನು ಈ ಬಾರಿ ಬಿಡುಗಡೆ ಮಾಡಿದೆ. ಇದು ಲಂಕಾ ಆಟಗಾರರಿಗೆ ಸರಿ ಕಾಣಿಸಿಲ್ಲ. ಹೀಗಾಗಿ ಟೆಸ್ಟ್ ನಾಯಕ ದಿಮುತ್ ಕರುಣರತ್ನೆ, ದಿನೇಶ್ ಚಾಂಡಿಮಾಲ್ ಮತ್ತು ಏಂಜಲೋ ಮ್ಯಾಥ್ಯೂಸ್ ಒಪ್ಪಂದಕ್ಕೆ ಸಹಿ ಹಾಕಿಲ್ಲ.
ಅಸಮಾಧಾನ ವ್ಯಕ್ತಪಡಿಸಿರುವ ಆಟಗಾರರು, ಈಗಿನ ಒಪ್ಪಂದ ಮತ್ತು ಅಲ್ಲಿರುವ ವೇತನ-ಭತ್ಯೆಗಳು ಉಳಿದೆಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟಿದೆ ಎಂದು ದೂರಿದ್ದಾರೆ. ಹೀಗಾಗಿ ನಾವು ಸಹಿ ಹಾಕುವುದಿಲ್ಲ ಎಂದಿದ್ದಾರೆ.
ಬೋರ್ಡ್ ಮತ್ತು ಆಟಗಾರರ ನಡುವಿನ ಅಸಮಾಧಾನ ಶೀಘ್ರ ಪರಿಹಾರ ಕಾಣದಿದ್ದರೆ ಮುಂಬರಲಿರುವ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸರಣಿಗೆ ಇದು ಪರಿಣಾಮ ಬೀರಲಿದೆ. ಜುಲೈನಲ್ಲಿ ಈ ಸರಣಿ ನಡೆಯಲಿದೆ. ಬೋರ್ಡ್ ನೀಡಿರುವ ಆಫರ್ಗೆ 24 ಆಟಗಾರರು ಸಹಿ ಮಾಡಿದ್ದಾರೆ. ಸಹಿ ಮಾಡದವರಿಗೆ ಜೂನ್ 3ರ ವರೆಗೆ ಗಡುವು ನೀಡಲಾಗಿದೆ ಎಂದು ತಿಳಿದು ಬಂದಿದೆ.