ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಸಾಲ್ ಪೆರೆರ ಕೊರೊನಾವೈರಸ್ಗೆ ತುತ್ತಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಸರಣಿಗೂ ಮುನ್ನ ಪೆರೆರ ಕೊರೊನಾವೈರಸ್ಗೆ ತುತ್ತಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮಂಗಳವಾರ 31ನೇ ವರ್ಷಕ್ಕೆ ಕಾಲಿಡಲಿರುವ ಕುಸಾಲ್ ಪೆರೆರಾ ಮುಂಬರುವ ಸರಣಿಯಲ್ಲಿ ಶ್ರಿಲಂಕಾ ತಂಡದ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿತ್ತು. ಆದರೆ ಕೊರೊನಾವೈರಸ್ನ ಈ ಫಲಿತಾಂಶದಿಂದಾಗಿ ಲಂಕಾ ತಂಡದ ಅನುಭವಿ ಆಟಗಾರನಿಗೆ ಆಘಾತ ಉಂಟಾಗಿದೆ.
ಭಾರತ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಕುಸಾಲ್ ಪೆರೆರಾ ಭುಜದ ನೋವಿಗೆ ಒಳಗಾಗಿದ್ದ ಪೆರೆರಾ ಸರಣಿಯಿಂದ ಹೊರಗುಳಿಯುವ ಅನಿವಾರ್ಯತೆಗೆ ಒಳಗಾಗಿದ್ದರು. ಸದ್ಯ ಪೆರೆರಾ ಗಾಯದಿಂದ ಚೇತರಿಸಿಕೊಂಡಿದ್ದು ಮುಂದಿನ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದ್ದರು. ಆದರೆ ಇದಕ್ಕೂ ಮುನ್ನ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಕುಸಾಲ್ ಪೆರೆರಾಗೆ ಕೊರೊನಾವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಶ್ರೀಲಂಕಾ ತಂಡದ ಈ ಅನುಭವಿ ತಂಡದಿಂದ ಹೊರಗುಳಿಯಬೇಕಿದೆ.
ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!
ಶ್ರೀಲಂಕಾದಲ್ಲಿನ ಕೊರೊನಾವೈರಸ್ ಪ್ರೊಟೊಕಾಲ್ ಪ್ರಕಾರ ಕುಸಾಲ್ ಪೆರೆರಾ ಎರಡು ವಾರಗಳ ಕಾಲ ಪ್ರತ್ಯೇಕವಾಗಿರಬೇಕಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ಹೊರಗುಳಿಯುವ ಆತಂಕಕ್ಕೆ ಒಳಗಾಗಿದ್ದಾರೆ ಕುಸಾಲ್ ಪೆರೆರಾ. ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿ ಸೆಪ್ಟೆಂಬರ್ 2ರಿಂದ ಆರಂಭವಾಗಲಿದೆ.
"ಭಾನುವಾರ ಶ್ರೀಲಂಕಾ ತಂಡದ ಆಟಗಾರರ ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ಕುಸಾಲ್ ಪೆರೆರಾ ಕೊರೊನಾವೈರಸ್ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ" ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನಪ್ರಕಟಣೆಯಲ್ಲಿ ತಿಳಿಸಿದೆ. ಈ ಬೆಳವಣಿಗೆ ಶ್ರೀಲಂಕಾ ಕ್ರಿಕೆಟ್ ತಂಡಕ್ಕೂ ಹಿನ್ನೆಡೆಯಾಗಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕುಸಾಲ್ ಪೆರೆರಾ ಅಲಭ್ಯವಾದಲ್ಲಿ ಅನುಭವಿ ಆಟಗಾರನ ಅಲಭ್ಯತೆಯಲ್ಲಿ ಮತ್ತೊಮ್ಮೆ ಶ್ರೀಲಂಕಾ ತಂಡ ಕಣಕ್ಕಿಳಿಯಬೇಕಿದೆ.