
ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಶ್ರೀಲಂಕಾ 21 ಸದಸ್ಯರ ಶ್ರೀಲಂಕಾ ತಂಡವನ್ನು ಘೋಷಣೆ ಮಾಡಲಾಗಿದೆ. ಕಳೆದ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಕೆಲ ಪ್ರಮುಖ ಆಟಗಾರರು ಈ ಸರಣಿಯಲ್ಲಿ ತಂಡಕ್ಕೆ ಮರಳಿದ್ದಾರೆ. ಈ ಮೂಲಕ ಬಲಿಷ್ಠ ತಂಡ ಆಸಿಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.
ಶ್ರೀಲಂಕಾ ತಂಡದ ಪ್ರಮುಖ ಆಟಗಾರರಾದ ವನಿಂದು ಹಸರಂಗ, ಭಾನುಕಾ ರಾಜಪಕ್ಷ ಮತ್ತು ಧನಂಜಯ ಡಿಸಿಲ್ವ ಈ ಸರಣಿಯಲ್ಲಿ ತಂಡಕ್ಕೆ ವಾಪಾಸಾಗಿದ್ದಾರೆ. ಈ ಮೂವರ ಆಗಮನದಿಂದಾಗಿ ಶ್ರೀಲಂಕಾ ತಂಡ ಬಲ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಈ ಸರಣಿಗೆ ಆಸ್ಟ್ರೇಲಿಯಾ ತಂಡ ಕೂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಹಸರಂಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಹಾಗೂ ಭಾಗಿಯಾಗಿದ್ದು ಇತ್ತೀಚೆಗಷ್ಟೇ ಅಂತ್ಯವಾಗಿರುವ ಐಪಿಎಲ್ನಲ್ಲಿ 26 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ವೈಟ್ಬಾಲ್ ಕ್ರಿಕೆಟ್ನ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರಾಗಿರುವ ಹಸರಂಗ ಆಸಿಸ್ ವಿರುದ್ಧದ ಚುಟುಕು ಸರಣಿಯಲ್ಲಿಯೂ ಮಿಂಚುತ್ತಿದ್ದಾರೆ.
ಇನ್ನು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ಭಾನುಕಾ ರಾಜಪಕ್ಷ ಕೂಡ ಏಕದಿನ ಸರಣಿಯ ಸ್ಕ್ವಾಡ್ಗೆ ಆಯ್ಕೆಯಾಗಿದ್ದಾರೆ. ಆದರೆ 30ರ ಹರೆಯದ ವಿಕೆಟ್ ಕೀಪರ್ ಬ್ಯಾಟರ್ ಸದ್ಯ ಫಾರ್ಮ್ ಕೊರತೆ ಅನುಭವಿಸುತ್ತಿದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ. ಇನ್ನು ಧನಂಜಯ ಡಿಸಿಲ್ವ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಎ ತಂಡದ ನಾಯಕತ್ವ ವಹಿಸಿಕೊಂಡಿದ್ದು ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಶ್ರೀಲಂಕಾ ಸ್ಕ್ವಾಡ್ ಹೀಗಿದೆ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಿನೇಶ್ ಚಂಡಿಮಲ್, ಭಾನುಕಾ ರಾಜಪಕ್ಸೆ, ನಿರೋಶನ್ ಡಿಕ್ವೆಲ್ಲಾ, ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ರಮೇಶ್ ತುಷರ, ಮೆನ್ ತುಶರ, ನುದಿವಾನ್ ತುಷರನಾನ್, ಮಹೇಶ್ ತೀಕ್ಷಣ, ಪ್ರವೀಣ್ ಜಯವಿಕ್ರಮ, ಜೆಫ್ರಿ ವಂಡರ್ಸೆ, ಲಹಿರು ಮಧುಶಂಕ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್.