ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿಳಿದಿದೆ. ಕೆಲವೇ ದಿನಗಳಲ್ಲಿ ಉಳಿದ ಎಲ್ಲಾ ಎಂಟು ತಂಡಗಳು ಭಾರತಕ್ಕೆ ಆಗಮಿಸಲಿವೆ.
ವಿಶ್ವದ ದೊಡ್ಡ ಕ್ರಿಕೆಟ್ ಪಂದ್ಯಾವಳಿಗೆ ಹಲವು ದೇಶಗಳು ತಮ್ಮ ಅಂತಿಮ ತಂಡಗಳನ್ನು ಪ್ರಕಟಿಸಿವೆ. ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಈ ಟೂರ್ನಿಗಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಅಕ್ಟೋಬರ್ 5ರಂದು ಅಹಮದಾಬಾದ್ನಲ್ಲಿ ಕಳೆದ ವಿಶ್ವಕಪ್ನ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ರೋಚಕ ಉದ್ಘಾಟನಾ ಪಂದ್ಯ ನಡೆಯಲಿದೆ.
ಬುಧವಾರ, ಸೆಪ್ಟೆಂಬರ್ 26ರಂದು 2023ರ ಐಸಿಸಿ ಏಕದಿನ ವಿಶ್ವಕಪ್ಗಾಗಿ ಶ್ರೀಲಂಕಾ ತನ್ನ 15 ಸದಸ್ಯರ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಕೆಲವು ಪ್ರಮುಖ ಆಟಗಾರರನ್ನು ಕಾಡುತ್ತಿರುವ ಗಾಯದ ಹಿನ್ನಡೆಯ ನಡುವೆಯೇ, ದ್ವೀಪ ರಾಷ್ಟ್ರವು ಅವರೆಲ್ಲರನ್ನು ವಿಶ್ವ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿರುವ ತಂಡವನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆಯೇ, ದಸುನ್ ಶನಕ ಅವರನ್ನು ನಾಯಕತ್ವದಲ್ಲಿ ಮುಂದುವರೆಸುವ ಮೂಲಕ ಅನುಮಾನಗಳನ್ನು ಹೋಗಲಾಡಿಸಲಾಗಿದೆ. ಹೀಗಾಗಿ ಶ್ರೀಲಂಕಾ ತಂಡವನ್ನು ಐಸಿಸಿ ಪಂದ್ಯಾವಳಿಗೆ ಮುನ್ನಡೆಸಲು ದಸುನ್ ಶನಕ ಸಿದ್ಧರಾಗಿದ್ದಾರೆ.

ಇದೇ ವೇಳೆ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ, ವನಿಂದು ಹಸರಂಗ, ಮಹೀಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ ಅವರ ಫಿಟ್ನೆಸ್ನ ಸುತ್ತಲಿನ ಅನುಮಾನಗಳ ನಡುವೆ ಆಯ್ಕೆ ಮಾಡಲಾಗಿದೆ.
ಶ್ರೀಲಂಕಾ ತಂಡದ ಮ್ಯಾನೇಜ್ಮೆಂಟ್ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದು, ಗಾಯಾಳು ಆಟಗಾರರ ಭಾಗವಹಿಸುವಿಕೆಯು ಅವರ ದೈಹಿಕ ಪರಿಸ್ಥಿತಿಯನ್ನು ಅವಲಂಬಿಸಿದೆ ಎಂದು ಒತ್ತಿಹೇಳಿದೆ.
ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ಗಮನಾರ್ಹ ದರ್ಜೆಯ ಮೂರು ಮಂಡಿರಜ್ಜು ನೋವಿನೊಂದಿಗೆ ಹೋರಾಡುತ್ತಿದ್ದಾನೆ. ಮಹೀಶ್ ತೀಕ್ಷಣ ಗ್ರೇಡ್ 2 ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾನೆ ಮತ್ತು ದಿಲ್ಶನ್ ಮಧುಶಂಕ ಅಭ್ಯಾಸದ ಸಮಯದಲ್ಲಿ ಉಂಟಾದ ಸ್ನಾಯು ಸೆಳೆತದೊಂದಿಗೆ ಹೋರಾಡುತ್ತಿದ್ದಾನೆ ಎಂಬುದು ಗಮನಾರ್ಹ.
ಯಾವುದೇ ಅನಿರೀಕ್ಷಿತ ಬದಲಾವಣೆಯ ನಿರೀಕ್ಷೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 2023ರ ಏಕದಿನ ವಿಶ್ವಕಪ್ಗೆ ಎರಡು ಮೀಸಲು ಆಟಗಾರರನ್ನು ಆಯ್ಕೆ ಮಾಡಿದೆ.
ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ದುಶನ್ ಹೇಮಂತ ಮತ್ತು ಹ್ಯಾಮಿಲ್ಟನ್ನಲ್ಲಿ 2023ರ ಮಾರ್ಚ್ 31ರಂದು ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಕಾಣಿಸಿಕೊಂಡ ಚಾಮಿಕಾ ಕರುಣಾರತ್ನೆ ಅವರಿಗೆ ಬ್ಯಾಕಪ್ ನಿರ್ಣಾಯಕ ಪಾತ್ರವನ್ನು ವಹಿಸಲಾಗಿದೆ.
ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ. ವಿಕೆಟ್ ಕೀಪರ್), ಪಾಥುಮ್ ನಿಸ್ಸಾಂಕ, ಕುಸಲ್ ಜನಿತ್, ದಿಮುತ್ ಕರುಣಾರತ್ನೆ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ಮತೀಶ ಪತಿರಣ ಮತ್ತು ಲಹಿರು ಕುಮಾರ, ವನಿಂದು ಹಸರಂಗ (ಫಿಟ್ನೆಸ್ ಆಧಾರ) ಮಹೇಶ್ ತೀಕ್ಷಣ (ಫಿಟ್ನೆಸ್ ಆಧಾರ), ದಿಲ್ಶನ್ ಮಧುಶಂಕ (ಫಿಟ್ನೆಸ್ ಆಧಾರ).
ಮೀಸಲು ಆಟಗಾರರು: ದುಶನ್ ಹೇಮಂತ, ಚಾಮಿಕಾ ಕರುಣಾರತ್ನೆ
2023ರ ಏಕದಿನ ವಿಶ್ವಕಪ್ಗೆ ಶ್ರೀಲಂಕಾ ತಂಡದ ಪ್ರಯಾಣವು ಸುಲಭವಾಗಿರಲಿಲ್ಲ. ಐಸಿಸಿ ಪಂದ್ಯಾವಳಿಯಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ತಂಡವು ವಿಶ್ವಕಪ್ ಅರ್ಹತಾ ಪಂದ್ಯಗಳ ಸವಾಲಿನ ಸಮುದ್ರದಲ್ಲಿ ಈಜಿ ಬರಬೇಕಾಯಿತು.
ನೆದರ್ಲ್ಯಾಂಡ್ಸ್ ಜೊತೆಗೆ ಹರಾರೆಯಲ್ಲಿ ನಡೆದ ಕ್ವಾಲಿಫೈಯರ್ ಫೈನಲ್ನಲ್ಲಿ ಶ್ರೀಲಂಕಾ ತಂಡ ವಿಜಯಶಾಲಿಯಾಗಿ ಹೊರಹೊಮ್ಮಿತು. ಭಾರತದ ವಿಶ್ವಕಪ್ಗೆ 9ನೇ ಸ್ಥಾನಿಯಾಗಿ ಟಿಕೆಟ್ ಗಿಟ್ಟಿಸಿತು.
ಅಕ್ಟೋಬರ್ 7ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸುವ ಮೂಲಕ ಶ್ರೀಲಂಕಾ ಸಿಂಹಳಿಗಳು ಘರ್ಜಿಸಲಿವೆ.