ಮಾಜಿ ಚಾಂಪಿಯನ್ ಶ್ರೀಲಂಕಾ ತಂಡವು 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತು. ಇದು ಇತ್ತೀಚಿನ ಐಸಿಸಿ ಪಂದ್ಯಾವಳಿಗಳಲ್ಲಿ ಶ್ರೀಲಂಕಾ ತಂಡದ ನಿರಾಸೆಗಳನ್ನು ಮರುಕಳಿಸಿದೆ.
ಇದೀಗ 2024ರ ಪಂದ್ಯಾವಳಿಯಿಂದಲೂ ಹೊರಬಿದ್ದ ಕಾರಣ, "ನಾವು ಇಡೀ ರಾಷ್ಟ್ರವನ್ನು ನಿರಾಸೆಗೊಳಿಸಿದ್ದೇವೆ. ಕ್ಷಮೆ ಇರಲಿ' ಎಂದು ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಒಪ್ಪಿಕೊಂಡಿದ್ದಾರೆ.

2014ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದ ಶ್ರೀಲಂಕಾ, ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ನೆದರ್ಲ್ಯಾಂಡ್ಸ್ ವಿರುದ್ಧ ಭಾನುವಾರ ಡಿ ಗುಂಪಿನ ತನ್ನ ಅಂತಿಮ ಪಂದ್ಯವನ್ನು ಆಡಲಿದೆ. ನೇಪಾಳ ತಂಡದ ವಿರುದ್ಧ ಯಾವುದೇ ಫಲಿತಾಂಶ ನೀಡದೆ ಮಳೆಯಿಂದ ರದ್ದುಗೊಂಡಿದ್ದರಿಂದ ತಮ್ಮ ಏಕೈಕ ಪಾಯಿಂಟ್ ಗಳಿಸಿದೆ.
"ನಾವು ಮೊದಲು ಇಡೀ ರಾಷ್ಟ್ರವನ್ನು ನಿರಾಸೆಗೊಳಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದಕ್ಕೆ ನಾವು ನಿಜವಾಗಿಯೂ ವಿಷಾದಿಸುತ್ತೇವೆ, ಏಕೆಂದರೆ ನಾವು ನಮ್ಮನ್ನು ಸಹ ನಿರಾಸೆಗೊಳಿಸಿದ್ದೇವೆ," ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಹೇಳಿದರು.
"ನಾವು ಈ ಫಲಿತಾಂಶವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾವು ಇಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ಅವುಗಳು ಯೋಚನೆ ಮಾಡುವ ವಿಷಯವಲ್ಲ. ಆದರೆ ನಾವು ಎರಡನೇ ಸುತ್ತನ್ನು ಮಾಡದಿರುವುದು ದುರದೃಷ್ಟಕರ," ಎಂದು ಅನುಭವಿ ಆಲ್ರೌಂಡರ್ ತಿಳಿಸಿದರು.

ಏಂಜೆಲೊ ಮ್ಯಾಥ್ಯೂಸ್ ಶ್ರೀಲಂಕಾ ತಂಡದ 2014ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ನಲ್ಲಿ 40 ರನ್ ಗಳಿಸಿದರೆ, ಢಾಕಾದಲ್ಲಿ ನಡೆದ ಫೈನಲ್ನಲ್ಲಿ ಭಾರತ ವಿರುದ್ಧ ಆರು ವಿಕೆಟ್ಗಳ ಗೆಲುವಿನಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.
ಭಾನುವಾರ, ಜೂನ್ 16ರಂದು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸುವಾಗ ಶ್ರೀಲಂಕಾ ಕೇವಲ ಹೆಮ್ಮೆಗಾಗಿ ಆಡಬೇಕಾಗುತ್ತದೆ. ಇಲ್ಲಿನ ಗೆಲುವು ಕನಿಷ್ಠ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಿಂದ ಮೇಲೆರಲು ಸಹಾಯ ಮಾಡುತ್ತದೆ.
ಆದರೆ, ತನ್ನ 90ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿರುವ ಏಂಜೆಲೊ ಮ್ಯಾಥ್ಯೂಸ್, ಶುಕ್ರವಾರದಂದು ನೇಪಾಳ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 1 ರನ್ನಿಂದ ಸೋತಿರುವ ಕಾರಣ, ನೆದರ್ಲ್ಯಾಂಡ್ಸ್ ತಂಡವನ್ನು ಕಡಿಮೆ ಅಂದಾಜು ಮಾಡಬಾರದು ಎಂದು ತನ್ನ ತಂಡಕ್ಕೆ ಸೂಚಿಸಿದರು.
"ನಾವು ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ನೇಪಾಳ ವಿರುದ್ಧದ ಪಂದ್ಯವು ಮಳೆಯಿಂದ ರದ್ದುಗೊಂಡಿರುವುದು ದುರದೃಷ್ಟಕರ, ಆದರೆ ಅದು ಆಗಿದೆ. ಈ ಪಂದ್ಯಾವಳಿಯಲ್ಲಿ ನಾವು ಕೇವಲ ಒಂದು ಪಂದ್ಯವನ್ನು ಹೊಂದಿದ್ದೇವೆ ಮತ್ತು ನಾವು ನಮ್ಮ ಹೆಮ್ಮೆಗಾಗಿ ಆಡುತ್ತೇವೆ. ನಾವು ನಮಗೆ ನ್ಯಾಯ ಸಲ್ಲಿಸಿಲ್ಲ, ವಿಶೇಷವಾಗಿ ಮೊದಲ ಎರಡು ಪಂದ್ಯಗಳಲ್ಲಿ ನಾವು ಆಡಿದ ರೀತಿ ನೋಡಿದರ," ಎಂದು ಏಂಜೆಲೊ ಮ್ಯಾಥ್ಯೂಸ್ ತಿಳಿಸಿದರು.