ಟಿ20 ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ವಿಶ್ವಕಪ್ಗೆ ಎಲ್ಲ ತಂಡಗಳು ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡಿಕೊಂಡಿವೆ. ಶ್ರೀಲಂಕಾ ತನ್ನ 15 ಸದಸ್ಯರ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಲಂಕಾ ತಂಡ ಲಯದಲ್ಲಿ ಇರದ ಸ್ಟಾರ್ ಆಟಗಾರ ಧನಂಜಯ ಡಿ ಸಿಲ್ವಾ ಅವರನ್ನು ತಂಡದಿಂದ ಕೈಬಿಟ್ಟಿದ್ದು ಅವರ ಸ್ಥಾನದಲ್ಲಿ ಕಾಮಿಂಡು ಮೆಂಡಿಸ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಟಾರ್ ಆಟಗಾರ ಕಾಮಿಂಡು ಮೆಂಡಿಸ್ ಅವರಿಗೂ ಸ್ಥಾನ ಲಭಿಸಿದೆ. ಇವರೊಂದಿಗೆ 23 ವರ್ಷದ ಯುವ ಆಟಗಾರ ಪವನ್ ರತ್ನಾಯಕೆ ಅವರನ್ನು ಸಹ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು 24 ವರ್ಷದ ಯುವ ಬೌಲರ್ ಇಶಾನ್ ಮಾಲಿಂಗ ಕೂಡ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಪ್ರಮೋದ್ ಮದುಶನ್ ಅವರ ಆಸೆ ಕಮರಿದೆ.

ಶ್ರೀಲಂಕಾ ತಂಡದ ದೊಡ್ಡ ಬದಲಾವಣೆ ಎಂದರೆ ಕಾಮಿಂಡು ಅವರಿಗೆ ಸ್ಥಾನ ನೀಡಿದ್ದಾಗಿದೆ. ಇವರು ಕಳೆದ ವರ್ಷ ಪಾಕಿಸ್ತಾನ ವಿರುದ್ಧ ಟಿ20 ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ತಂಡದ ಭಾಗವಗಿರಲಿಲ್ಲ. ಇವರು ಈಗ ತಂಡಕ್ಕೆ ಮರಳಿದ್ದಾರೆ. ಲಯಕ್ಕಾಗಿ ಪರದಾಡುತ್ತಿರುವ ಧನಂಜಯ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇವರು ಕಳೆದ ಎರಡು ಸರಣಿಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಇವರು ರನ್ ವೇಗಕ್ಕೂ ವೇಗವನ್ನು ಹೆಚ್ಚಿಸಿರಲಿಲ್ಲ. ಹೀಗಾಗಿ ಇವರು ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಶ್ರೀಲಂಕಾ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್, ಓಮನ್ ಮತ್ತು ಜಿಂಬಾಬ್ವೆ ತಂಡಗಳು ಸಹ ಸ್ಥಾನ ಪಡೆದಿವೆ. ಶ್ರೀಲಂಕಾ ತನ್ನ ಗುಂಪು ಹಂತದ ಎಲ್ಲ ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಫೆಬ್ರವರಿ 8 ರಂದು ಲಂಕಾ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯಕ್ಕೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಆತಿಥ್ಯ ನೀಡಲಿದ್ದು, ಐರ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಫೆಬ್ರವರಿ 12 ರಂದು ಓಮನ್ ವಿರುದ್ಧ, ಫೆಬ್ರವರಿ 16 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಫೆಬ್ರವರಿ 19 ರಂದು ಜಿಂಬಾಬ್ವೆ ವಿರುದ್ಧ ಕಾದಾಟ ನಡೆಸಲಿದೆ.
ಟಿ20 ವಿಶ್ವಕಪ್ಗೆ ಶ್ರೀಲಂಕಾ ತಂಡ: ದಾಸುನ್ ಶನಕ (ನಾಯಕ), ಪತುಮ್ ನಿಸಂಕ, ಕಾಮಿಲ್ ಮಿಶಾರಾ, ಕುಸಲ್ ಮೆಂಡಿಸ್, ಕುಸಲ್ ಪೆರೆರಾ, ಚರಿತ್ ಅಸಲಂಕ, ಕಾಮಿಂಡು ಮೆಂಡಿಸ್, ಜನಿತ್ ಲಿಯಾನಗೆ, ಪವನ್ ರತ್ನಾಯಕೆ, ದುನಿತ್ ವೆಲ್ಲಲಾಗೆ, ವನಿಂದು ಹಸರಂಗ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ಮತೀಶ ಪತಿರಣ, ಈಶಾನ್ ಮಾಲಿಂಗ.