
ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ ಶ್ರೀಲಂಕಾ ಕ್ರಿಕೆಟ್ ತಂಡದ ನೂತನ ಜರ್ಸಿ ಅನಾವರಣಗೊಂಡಿದೆ. ಶ್ರೀಲಂಕಾದ ಪತ್ರಕರ್ತರೋರ್ವರು ಹೊಸ ಜರ್ಸಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಶ್ರೀಲಂಕಾದ ಅಗ್ರ ಕ್ರಮಾಂಕದ ಆಟಗಾರ ದಿನೇಶ್ ಚಾಂಡಿಮಲ್ ಜರ್ಸಿಯನ್ನು ಧರಿಸಿ ಫೋಸ್ ನೀಡಿದ್ದಾರೆ. ಶ್ರೀಲಂಕಾದ ಈ ನೂತನ ಜರ್ಸಿ ಸಾಂಪ್ರದಾಯಿಕ ಹಳದಿ ಹಾಗೂ ನೀಲಿ ಬಣ್ಣವನ್ನು ಹೊಂದಿದೆ. ಹಾಗೂ ಕೆಲ ವಿಶೇಷ ವಿನ್ಯಾಸಗಳನ್ನು ಈ ಜರ್ಸಿಯಲ್ಲಿ ಮಾಡಲಾಗಿದೆ.
ಈ ಬಾರಿಯ ಈ ಮೆಗಾ ಟೂರ್ನಿ ಐಪಿಎಲ್ ಮುಕ್ತಾಯದ ಬಳಿಕ ಯುಎಇ ಹಾಗೂ ಒಮಾನ್ನಲ್ಲಿ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಭಾಗಿಯಾಗುವ ಮೂಲಕ ಶ್ರೀಲಂಕಾ ತಂಡದ ಈ ಭಾರಿಯ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ. ಮೊದಲ ಪಂದ್ಯವನ್ನು ಶ್ರೀಲಂಕಾ ನಮೀಬಿಯಾ ತಂಡದ ವಿರುದ್ಧ ಅಕ್ಟೋಬರ್ 18ರಂದು ಆಡಲಿದೆ.
2014ರ ವಿಶ್ವಕಪ್ನ ಚಾಂಪಿಯನ್ ತಂಡವಾಗಿರುವ ಶ್ರೀಲಂಕಾ ಈ ಬಾರಿಯ ವಿಶ್ವಕಪ್ನ ಪ್ರಧಾನ ಸುತ್ತಿಗೆ ನೇರವಾಗಿ ಅರ್ಹತೆ ಸಂಪಾದಿಸಲು ವಿಫಲವಾಗಿದೆ. ಐಸಿಸಿ ಟಿ20 ಶ್ರೇಯಾಂಕಪಟ್ಟಿಯಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಕಾರಣದಿಂದಾಗಿ ಲಂಕಾ ತಂಡ ದುರ್ಬಲ ತಂಡಗಳ ಜೊತೆಗೆ ಸೆಣೆಸಾಡಿ ಪ್ರಧಾನ ಸುತ್ತಿಗೆ ಅರ್ಹತೆಯನ್ನು ಸಂಪಾದಿಸ ಬೇಕಿದೆ.
ದಸುನ್ ಶನಕ ನಾಯಕತ್ವ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವನ್ನು ದಾಸುನ್ ಶನಕ ಮುನ್ನಡೆಸಲಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತದ ವಿರುದ್ಧ ನಡೆದ ಟಿ20 ವಿಶ್ವಕಪ್ನಲ್ಲಿ ಜಯಗಳಿಸಿದ ಬಳಿಕ ವಿಶ್ವಕಪ್ನಲ್ಲಿಯೂ ಮುನ್ನಡೆಸುವ ಅವಕಾಶ ಗಳಿಸಿದ್ದಾರೆ ಶನಕ. ಮಧ್ಯಮ ಕ್ರಮಾಂಕದ ಆಟಗಾರನಾಗಿರುವ ಶನಕಾಗೆ ಉಪನಾಯಕನಾಗಿ ಧನಂಜಯ ಡಿಸಿಲ್ವ ಸಾಥ್ ನೀಡಲಿದ್ದಾರೆ.
ಇನ್ನು ಪ್ರತಿ ಬಾರಿಯೂ ತಂಡಗಳು ವಿಶ್ವಕಪ್ನಂತಾ ಪ್ರಮುಖ ಟೂರ್ನಿಗಳಿಗೆ ನೂತನ ವಿನ್ಯಾಸದ ಜರ್ಸಿಗಳೊಂದಿಗೆ ಕಣಕ್ಕಿಳಿಯುವುದು ಸಾಮಾನ್ಯ. ಭಾರತ ಕೂಡ ಮಹತ್ವದ ಟೂರ್ನಿಗಳಿಗೆ ಹೊಸ ವಿನ್ಯಾಸದ ಜರ್ಸಿಯೊಮದಿಗೆ ಕಣಕ್ಕಿಳಿಯುವ ಸಂಪ್ರದಾಯವನ್ನಿಟ್ಟುಕೊಂಡಿದೆ. ಆದರೆ ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಈ ಹಿಂದಿನ ಸರಣಿಯಲ್ಲಿ ಧರಿಸಿದ ರೆಟ್ರೋ ಮಾದರಿಯ ಜರ್ಸಿಯಲ್ಲಿಯೇ ಕಣಕ್ಕಿಳಿಯಲಿದೆಯಾ ಎಂಬ ಬಗ್ಗೆ ಅನುಮಾನಗಳಿತ್ತು. ಆದರೆ ಈಗ ಭಾರತ ಹೊಸ ವಿನ್ಯಾಸದ ಜರ್ಸಿಯೊಂದಿಗೆ ಆಡುವುದು ಸ್ಪಷ್ಟವಾಗಿದೆ.
ಮುಂದಿನ ಬುಧವಾರ ಅಕ್ಟೋಬರ್ 13ರಂದು ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ ಗೊಳಿಸಲಾಗುತ್ತದೆ ಎಂದು ಕಳೆದ ಶುಕ್ರವಾರ ಬಿಸಿಸಿಐ ಘೋಷಣೆ ಮಾಡಿದೆ. ಈ ಮೂಲಕ ಭಾರತ ತಮಡ ಕೂಡ ಈ ಬಾರಿಯ ಟೂರ್ನಿಯಲ್ಲಿ ನೂತನ ಮಾದರಿಯ ಜರ್ಸಿಯೊಂದಿಗೆ ಕಣಕ್ಕಿಳಿಯುವುದು ಅಧಿಕೃತವಾಗಿದೆ. ಭಾರತದ ಅಧಿಕೃತ ಕಿಟ್ ಸ್ಪಾನ್ಸರ್ ಆಗಿರುವ ಎಂಪಿಎಲ್ ಹೊಸ ಜರ್ಸಿಯನ್ನು ಅನಾವರಣಗೊಳಿಸಲಿದೆ.
ಶ್ರೀಲಂಕಾ ತಂಡದ ಸಂಪೂರ್ಣ ಸ್ಕ್ವಾಡ್: ದಾಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ (ವಿಕೆಟ್ ಕೀಪರ್), ಕುಸಲ್ ಪೆರೇರಾ, ದಿನೇಶ್ ಚಾಂಡಿಮಾಲ್, ಪಾತುಮ್ ನಿಸ್ಸಂಕ, ಚರಿತ್ ಅಸಲಂಕ, ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಚಾಮಿಕ ಕರುಣರತ್ನೆ, ವಾನಿಂದು ಹಸರಂಗ, ದುಷ್ಮಂತ ಚಮೀರ, ಲಹಿರು ಕುಮಾರ, ಮಹೀಶ್ ತೀಕ್ಷ್ಣ, ಅಕಿಲ ಧನಂಜಯ, ಬಿನೂರ ಫೆರ್ನಾಂಡೊ