
ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಕುಸಲ್ ಮೆಂಡಿಸ್ ಅವರನ್ನು ಭಾನುವಾರ(ಜುಲೈ 5) ಪೊಲೀಸರು ಬಂಧಿಸಿದ್ದಾರೆ. ಪಾದಾಚಾರಿಗೆ ಡಿಕ್ಕಿ ಹೊಡೆದು ಆತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಸಲ್ ಮೆಂಡಿಸ್ ಅವರನ್ನು ವಶಕ್ಕೆ ಪಡೆದಿದೆ ಎಂದು ಪೊಲಿಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿವಸಂಸ್ಥೆ ವರದಿ ಮಾಡಿದೆ.
ಶ್ರೀಲಂಕಾ ರಾಜಧಾನಿ ಕೊಲಬೋದ ಉಪನಗರ ಪನದುರಾದಲ್ಲಿ ಕುಸಲ್ ಮೆಂಡಿಸ್ ಬೈಸಿಕಲ್ನಲ್ಲಿ ತೆರಳುತ್ತಿದ್ದ 74 ವರ್ಷದ ಹಿರಿಯ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಆ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೆಂಡಿಸ್ ಅವರನ್ನು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ಗೆ ಇಂದು ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಅಪಘಾತದ ಬಗ್ಗೆ ಹೆಚ್ಚಿನ ತನಿಖೆಯಲ್ಲಿ ಕೊಲಂಬೋ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ.
25 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಸಲ್ ಮೆಂಡಿಸ್ ಶ್ರೀಲಂಕಾ ಕ್ರಿಕೆಟ್ ತಂಡವನ್ನು 44 ಟೆಸ್ಟ್ ಹಾಗೂ 76 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಮಡದ ಖಾಯಂ ಸದಸ್ಯರಾಗಿರುವ ಕುಸಲ್ ಮೆಂಡಿಸ್ ಕೊರೊನಾ ವೈರಸ್ ಕಾರಣದಿಂದಾಗಿ ನಿಂತಿರುವ ಕ್ರಿಕೆಟ್ ಮರುಚಾಲನೆಗೆ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಕುಸಲ್ ಮೆಂಡಿಸ್ 2995 ರನ್ ಗಳಿಸಿದ್ದರೆ, ಏಕದಿನದಲ್ಲಿ 2167ರನ್ ಗಳಿಸಿದ್ದಾರೆ. 26 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮೆಂಡಿಸ್ 484 ರನ್ ಗಳಿಸಿದ್ದಾರೆ. ಈ ಮಧ್ಯೆ ಕೊರೊನಾ ವೈರಸ್ ಕಾರಣದಿಂದಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ಸೇರಿದಂತೆ ಕೆಲ ಸರಣಿಗಳನ್ನು ರದ್ದುಗೊಳಿಸಿದೆ. ಸದ್ಯ ಪಲ್ಲೆಕೆಲೆ ಸ್ಟೇಡಿಯಮ್ನಲ್ಲಿ ಆಟಗಾರರ ತರಬೇತಿ ಶಿಬಿರ ಆರಂಭವಾಗಿದೆ.