ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದ ಮರುದಿನವೇ ಭಾರತ ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದೆ. ಪಾಕ್ ವಿರುದ್ಧದ ಯಶಸ್ಸಿನ ಗುಂಗಿನಲ್ಲೇ ಇದ್ದ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ಗಳು ಆಘಾತ ನೀಡಿದ್ದಾರೆ. ಭಾರತ ತಂಡದ ಎಲ್ಲಾ 10 ವಿಕೆಟ್ಗಳು ಕುಡ ಶ್ರೀಲಂಕಾದ ಸ್ಪಿನ್ನರ್ಗಳ ಪಾಲಾಗಿರುವುದೇ ವಿಶೇಷ.
ಅದರಲ್ಲೂ ಶ್ರೀಲಂಕಾದ ಇಬ್ಬರು ಸ್ಪಿನ್ನರ್ಗಳೇ ಭಾರತ ತಂಡದ 9 ವಿಕೆಟ್ಗಳನ್ನು ಹಂಚಿಕೊಂಡಿದ್ದಾರೆ. ಅಂತಿಮ ಆಟಗಾರನಾಗಿ ಔಟಾದ ಅಕ್ಷರ್ ಪಟೇಲ್ ಮಾತ್ರವೇ ಮತೀಶ ತೀಕ್ಷಣಗೆ ವಿಕೆಟ್ ಒಪ್ಪಿಸಿದರು. ಇಳಿದ ಒಂಬತ್ತು ವಿಕೆಟ್ಗಳನ್ನು ಹಂಚಿಕೊಂಡಿದ್ದು ದುನಿತ್ ವಲ್ಲಲಗೆ ಹಾಗೂ ಚರಿತ ಅಸಲಂಕಾ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಆಘಾತ ನೀಡಿದ್ದು ಯುವ ಸ್ಪಿನ್ನರ್ ದುನಿತ್ ವಲ್ಲಲಗೆ. 20ರ ಹರೆಯದ ಈ ಯುವ ಸ್ಪಿನ್ನರ್ನ ಮೋಡಿಗೆ ಭಾರತದ ಅಗ್ರ ಬ್ಯಾಟರ್ಗಳೇ ವಿಕೆಟ್ ಒಪ್ಪಿಸಿದ್ದರು. ಟೀಮ್ ಇಂಡಿಯಾದ ಎಲ್ಲಾ ಪ್ರಮುಖ ಆಟಗಾರರನ್ನು ಔಟ್ ಮಾಡಿದ ಈ ಸ್ಪಿನ್ನರ್ ತಂಡಕ್ಕೆ ಭಾರೀ ಮೇಲುಗೈ ಒದಗಿಸಿದರು. ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಈ ಐವರು ಬ್ಯಾಟರ್ಗಳು ಕೂಡ ಯುವ ಸ್ಪಿನ್ನರ್ನ ಬೌಲಿಂಗ್ ಮೋಡಿಗೆ ಒಳಗಾಗಿ ವಿಕೆಟ್ ಕಳೆದುಕೊಂಡರು. ತಮ್ಮ 10 ಓವರ್ಗಳ ಬೌಲಿಂಗ್ ಕೋಟಾದಲ್ಲಿ 40 ರನ್ಗಳನ್ನು ನೀಡಿ 5 ವಿಕೆಟ್ ಗೊಂಚಲು ಪಡೆದುಕೊಂಡಿದ್ದಾರೆ ಈ ಸ್ಪಿನ್ನರ್.
ಇನ್ನು ಉಳಿದ ಬ್ಯಾಟರ್ಗಳಿಗೆ ಫೆವಿಲಿಯನ್ ಹಾದಿ ತೋರಿಸಿದ್ದು ಆಲ್ರೌಂಡರ್ ಅಸಲಂಕಾ. ವಲ್ಲಲಗೆ ಅವರಿಗೆ ಅದ್ಭುವಾಗಿ ಸಾಥ್ ನೀಡಿದ ಅಸಲಂಕಾ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು. ಇಶಾನ್ ಕಿಶನ್, ರವೀಂದ್ರ ಜಡೇಜಾ ಸೇರಿದಂತೆ ಜಸ್ಪ್ರೀತ್ ಬೂಮ್ರಾ ಹಾಗೂ ಕುಲ್ದೀಪ್ ಯಾದವ್ ವಿಕೆಟ್ ಅಸಲಂಕಾ ಪಾಲಾಯಿತು. ಅಸಲಂಕಾ 9 ಓವರ್ ಬೌಲಿಂಗ್ ನಡೆಸಿ ಕೇವಲ 18 ರನ್ಗಳನ್ನು ನೀಡಿ 4 ವಿಕಟ್ ಕಬಳಿಸಿದ್ದರು.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಪ್ರದರ್ಶನ ನೀರಸವಾಗಿತ್ತು. ಪಕ್ಕಾ ಸ್ಪಿನ್ ಟ್ರ್ಯಾಕ್ ಆಗಿ ಬದಲಾಗಿದ್ದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದ ಪಿಚ್ನಲ್ಲಿ ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲುವುದು ಬ್ಯಾಟರ್ಗಳಿಗೆ ಅಸಾಧ್ಯವಾಗಿತ್ತು. ಹೀಗಾಗಿ 49.1ಓವರ್ಗಳ ಕಾಲ ಬ್ಯಾಟಿಂಗ್ ನಡೆಸಿದ ಭಾರತ 213 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಶಾರ್ದೂಲ್ ಠಾಕೂರ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ
ಬೆಂಚ್: ಕುಸಲ್ ಪೆರೇರಾ, ಬಿನೂರ ಫೆರ್ನಾಂಡೋ, ಪ್ರಮೋದ್ ಮದುಶನ್, ದುಶನ್ ಹೇಮಂತ