ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಕಂಗಾಲಾಗಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ದಸುನ್ ಶನಕ ವಿಶ್ವಕಪ್ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ವಿಶ್ವಕಪ್ನ ಉಳಿದ ಪಂದ್ಯಗಳಲ್ಲಿ ದಸುನ್ ಶನಕಾ ಅಲಭ್ಯರಾಗಿದ್ದು, ಬದಲೀ ಆಟಗಾರನನ್ನು ಆಯ್ಕೆ ಮಾಡಲಾಗಿದೆ.
ತೊಡೆಯ ಗಾಯದಿಂದ ದಸುನ್ ಶನಕ ಅವರು ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದು ಚಾಮಿಕಾ ಕರುಣರತ್ನ ಅವರನ್ನು ಬದಲಿ ಆಟಗಾರನಾಗಿ ಹೆಸರಿಸಲಾಗಿದೆ. ಚಾಮಿಕಾ ಕರುಣರತ್ನ ಶನಕ ಬದಲಾಗಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಅಂಗೀಕರಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶನಿವಾರ ತಿಳಿಸಿದೆ.

ಮಂಗಳವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದಸುನ್ ಶನಕ ಅವರು ಬಲ ತೊಡೆಯ ಸ್ನಾಯುವಿನ ಸೆಳೆತಕ್ಕೆ ಒಳಗಾಗಿದ್ದರು. ಈ ಗಾಯದಿಂದ ಚೇತರಿಸಿಕೊಳ್ಳಲು ಶನಕ ಅವರಿಗೆ ಮೂರು ವಾರಗಳ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರಿಂದ ಶನಕ ವಿಶ್ವಕಪ್ನಿಂದ ಹೊರಗುಳಿಯಲು ನಿರ್ಧರಿಸಿದರು.
"ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಈವೆಂಟ್ ತಾಂತ್ರಿಕ ಸಮಿತಿಯು ಶ್ರೀಲಂಕಾ ತಂಡದಲ್ಲಿ ದಾಸುನ್ ಶನಕಾ ಬದಲಿಗೆ ಚಾಮಿಕಾ ಕರುಣಾರತ್ನೆಯನ್ನು ಅನುಮೋದಿಸಿದೆ" ಎಂದು ಐಸಿಸಿ ತಿಳಿಸಿದೆ.ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಶ್ರೀಲಂಕಾ, ಮುಂದಿನ ಸೋಮವಾರ ಲಕ್ನೋದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 102 ರನ್ಗಳ ಅಂತರದಲ್ಲಿ ಸೋಲು ಕಂಡಿದ್ದ ಶ್ರೀಲಂಕಾ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೂಡ ಸೋಲು ಕಂಡಿತ್ತು, ಮೊದಲು ಬ್ಯಾಟಿಂಗ್ 344 ರನ್ ಗಳಿಸಿದರೂ, ಪಾಕಿಸ್ತಾನ ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತುವ ಮೂಲಕ ಶ್ರೀಲಂಕಾ ತಂಡವನ್ನು ಮಣಿಸಿತ್ತು.
ಅಕ್ಟೋಬರ್ 16ರಂದು ಶ್ರೀಲಂಕಾ ತನ್ನ ಮೂರನೇ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವಾದ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಕೂಡ ಮೊದಲ ಎರಡು ಪಂದ್ಯಗಳನ್ನು ಸೋತಿದ್ದು, ಸೋಮವಾರ ನಡೆಯುವ ಈ ಪಂದ್ಯ ಎರಡೂ ತಂಡಗಳಿಗೆ ಮುಖ್ಯವಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿವೆ.
ಶ್ರೀಲಂಕಾ ತಂಡಕ್ಕೆ ವನಿಂದು ಹಸರಂಗ ಅವರಂತಹ ಬೌಲರ್ ಗಾಯಗೊಂಡಿರುವುದು ಹಿನ್ನಡೆಗೆ ಕಾರಣವಾಗಿದೆ. ಭಾರತದ ಪಿಚ್ಗಳಲ್ಲಿ ಹಸರಂಗ ಮಾರಕವಾಗಬಲ್ಲ ಬೌಲರ್ ಆಗಿದ್ದರು, ಆದರೆ ಅವರು ಗಾಯಗೊಂಡಿದ್ದು ವಿಶ್ವಕಪ್ನಿಂದ ಹೊರಬಿದ್ದಿದ್ದರು. ಈಗ ಮತ್ತೊಬ್ಬ ಆಲ್ರೌಂಡರ್ ಶನಕ ಕೂಡ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಏಕದಿನ ವಿಶ್ವಕಪ್ಗೆ ಶ್ರೀಲಂಕಾ ತಂಡ : ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಚಾಮಿಕ ಕರುಣರತ್ನೆ, ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ದಿಮುತ್ ಕರುಣರತ್ನ, ಲಾಹಿರು ಕುಮಾರ, ದುಶನ್ ಹೇಮಂತ, ಮಹೀಶ ತೀಕ್ಷಣ.