ವಿಶ್ವ ಟೆಸ್ಟ್ ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್, ಘಟಾನುಘಟಿ ಬೌಲರ್ಗಳು ತನ್ನ ಮುಂದೆ ಮಂಡಿ ಊರುವಂತೆ ಮಾಡಿದ್ದ ದಾಂಡಿಗ ಸ್ಟೀವ್ ಸ್ಮಿತ್ ಇಂದು ತಾವು ಮಾಡಿದ ತಪ್ಪಿಗೆ ಅಕ್ಷರಷಃ ಗಳ-ಗಳನೆ ಅತ್ತು ಬಿಟ್ಟರು.
ಸಿಡ್ನಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮೊದಲಿಗೆ ಹೇಳಿದ್ದು 'ಐ ಆಮ್ ಸಾರಿ' ಎಂದು. ಸುದ್ದಿಗೋಷ್ಠಿಯ ಆರಂಭದಿಂದಲೇ ಭಾವುಕರಾಗಿದ್ದ ಸ್ಟೀವ್ ಸ್ಮಿತ್ ಪ್ರತಿ ಮಾತಲ್ಲೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡೇ ಕ್ಷಮಿಸುವಂತೆ ಮನವಿ ಮಾಡುತ್ತಿದ್ದರು.
'ನನ್ನ ಆಟವನ್ನು ನೋಡಿ ಮಕ್ಕಳು, ಯುವಕರು ಸ್ಪೂರ್ತಿ ಪಡೆಯಬೇಕೆಂಬುದು ನನ್ನ ಆಸೆ ಆಗಿತ್ತು. ಆದರೆ ಈಗ ನಾನು ತಪ್ಪಿತಸ್ಥ ಆದರೆ ನನ್ನ ವಿರುದ್ಧ ನೀವು ಟೀಕೆ ಮಾಡುವ ಸಮಯದಲ್ಲಿ ದಯವಿಟ್ಟು ನನ್ನ ತಂದೆ-ತಾಯಿಯ ಬಗ್ಗೆ ಸ್ವಲ್ಪ ಯೊಚನೆ ಮಾಡಿ' ಎಂದು ಮಾಧ್ಯಮದವರನ್ನು ಅಂಗಲಾಚುತ್ತಾ ಮುಂದೆ ಮಾತನಾಡಲಾರದೆ ಗಳ-ಗಳನೆ ಅತ್ತು ಬಿಟ್ಟರು ಸ್ಟೀವ್ ಸ್ಮಿತ್.
ಒಂದು ಸಣ್ಣ ಬೇಜವಾಬ್ದಾರಿಯ ವರ್ತನೆ, ಕೆಲ ಸಮಯದ ನಿರ್ಲಕ್ಷ್ಯತೆ, ಸಣ್ಣ ತಂತ್ರ ದಂತ ಕತೆ ಆಗುವಂತಹಾ ಎಲ್ಲ ಅರ್ಹತೆ ಇದ್ದ ಅದ್ಬುತ ಕ್ರಿಕೆಟ್ ಆಟಗಾರನ ಕ್ರಿಕೆಟ್ ಜೀವನದ ಮೇಲೆ ಎಂದೂ ಮಾಸದ ಕಪ್ಪು ಚುಕ್ಕೆಯನ್ನು ಇಟ್ಟುಬಿಟ್ಟಿದೆ.
'ನನ್ನ ಜೀವನ ಪರ್ಯಂತ ಆ ಘಟನೆಗಾಗಿ ನಾನು ವಿಷಾದ ಪಡುತ್ತಲೇ ಇರುತ್ತೇನೆ, ಮರುಗುತ್ತಲೇ ಇರುತ್ತೇನೆ' ಎಂದ ಸ್ಟೀವ್ ಸ್ಮಿತ್ ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ವಿರುದ್ಧ ಸರಿಯಾದ ನಿರ್ಣಯವನ್ನೇ ತೆಗೆದುಕೊಂಡಿದೆ ಎಂದು ಭಾವುಕರಾದರು.
ಸ್ಯಾಂಡ್ ಪೇಪರ್ ತಂತ್ರ ರೂಪಿಸಿದ ಡೇವಿಡ್ ವಾರ್ನರ್ ಅವರ ಮೇಲೆ ತಪ್ಪು ಹೊರಿಸಲು ಇಚ್ಛಿಸದ ಸ್ಟೀವ್ ಸ್ಮಿತ್ ಅವರು 'ನಾನು ಆಸ್ಟ್ರೇಲಿಯಾ ತಂಡದ ನಾಯಕ, ಏನೇ ನಡೆದಿದ್ದರು ಅದರ ಸಂಪೂರ್ಣ ಜವಾಬ್ದಾರಿ ನನ್ನದೇ, ಯಾರನ್ನೂ ಜರಿಯುವ ಉದ್ದೇಶ ನನಗಿಲ್ಲ' ಎಂದು ತಪ್ಪಿನ ಹೊಣೆಯನ್ನು ತಮ್ಮ ಮೇಲೆಯೇ ಹೊರಿಸಿಕೊಂಡರು.
'ನಾನು ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಗಂಭೀರ ತಪ್ಪು ಎಸಗಿದ್ದೇನೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ, ನನ್ನ ನಾಯಕತ್ವದ ವೈಫಲ್ಯ, ನನ್ನ ಈ ತಪ್ಪಿನಿಂದ ಮುಂದಿನ ಪೀಳಿಗೆ ಪಾಠ ಕಲಿಯುವಂತಾದರೆ ಅಲ್ಪ ಸಂತೋಶವನ್ನು ಅನುಭವಿಸುತ್ತೇನೆ, ಮಕ್ಕಳು, ಯುವಕರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಅದರ ಪರಿಣಾಮ ದೇಶದ ಮೇಲೆ, ನಿಮ್ಮ ಪೋಷಕರ ಮೇಲೆ ಏನಾಗುತ್ತದೆ ಯೋಚಿಸಿರಿ' ಎಂದು ಭಾವುಕರಾಗಿ ಹೇಳಿದರು ಸ್ಟೀವ್ ಸ್ಮಿತ್.
'ಸಮಯ ಕಳೆದಂತೆ ನನ್ನ ಕಳೆದು ಹೊದ ಗೌರವವನ್ನು ಮತ್ತೆ ಪಡೆಯುವ ನಂಬಿಕೆ ಹೊಂದಿದ್ದೇನೆ, ಜನರ ಕ್ಷಮೆಯನ್ನೂ ಗಳಿಸುವ ವಿಶ್ವಾಸ ಹೊಂದಿದ್ದೇನೆ. ನಾನು ಆಸ್ಟ್ರೇಲಿಯಾ ತಂಡದ ಪರ ಆಡಲು ಹೆಮ್ಮೆ ಪಡುತ್ತೇನೆ, ಮತ್ತೆ ಆಸ್ಟ್ರೇಲಿಯಾ ಪರ ಆಡುವ ಅದೃಷ್ಠ ಸಿಗುತ್ತದೆಂಬ ನಂಬಿಕೆಯಲ್ಲಿದ್ದೇನೆ, ಕ್ರಿಕೆಟ್ ನನ್ನ ಜೀವನವಾಗಿತ್ತು, ಮುಂದೆಯೂ ಆಗುತ್ತದೆ ಎಂದು ನಂಬಿದ್ದೇನೆ' ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ನುಗ್ಗಿ ಬರುತ್ತಿದ್ದ ಅಳುವನ್ನು ಗಂಟಲಲ್ಲಿ ನುಂಗಿಕೊಳ್ಳಲು ಕಷ್ಟಪಡುತ್ತಿದ್ದ ಸ್ಟೀವ್ ಸ್ಮಿತ್ 'ನನ್ನಿಂದ ಆಸ್ಟ್ರೇಲಿಯನ್ನರು, ಕ್ರಿಕೆಟ್ ಅಭಿಮಾನಿಗಳು ಎಲ್ಲರಿಗೂ ನೋವಾಗಿದೆ' ಎಂದ ಅವರೆಲ್ಲರ ಕ್ಷಮಾಪಣೆ ಕೇಳಲು ಪದಗಳಿಗಾಗಿ ತಡಕಾಡಿದರು. ಕೊನೆಗೆ 'ಐ ಆಮ್ ಸಾರಿ' ಎಂದಷ್ಟೆ ಹೇಳಿ ಗಳ-ಗಳನೆ ಅತ್ತರು. ಏನೂ ಮಾತಾಡಲಾಗದೆ ಪ್ರೆಸ್ ಮೀಟ್ನಿಂದ ಕಣ್ಣೊರೆಸಿಕೊಳ್ಳುತ್ತಾ ಎದ್ದು ಹೋಗಿ ಬಿಟ್ಟರು.