
ಲಂಡನ್, ಜೂನ್ 17: ಜೂನ್ 9ರಂದು ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದಿದ್ದ ಭಾರತ vs ಆಸ್ಟ್ರೇಲಿಯಾ ಪಂದ್ಯದ ವೇಳೆ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಭಾರತದ ಅಭಿಮಾನಿಗಳು ಗೇಲಿ ಮಾಡಿ ನೋಯಿಸಿದ್ದರು. ಆಗ ಸ್ಮಿತ್ ಬೆಂಬಲಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಿದ್ದರು. ಈ ಘಟನೆಗೆ ಸಂಬಂಧಿಸಿ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಘಟನೆಯ ಬಗ್ಗೆ ಮಾತನಾಡಿದ ಸ್ಮಿತ್, 'ಕೊಹ್ಲಿಯದ್ದು ಮೆಚ್ಚೆನಿಸುವ ವ್ಯಕ್ತಿತ್ವ. ಅಲ್ಲಿ ನೆರೆದಿದ್ದ ಪ್ರೇಕ್ಷಕರು ಮಾಡಿದ್ದು ತಪ್ಪಲ್ಲ. ನಾನೇ ಮಾಡಿದ ತಪ್ಪಿಗೆ ನಾನೀ ಅವಮಾನಗಳನ್ನೆಲ್ಲ ಮೀರಿ ಬರಬೇಕಿದೆ. ಆದರೆ ಕೊಹ್ಲಿಯದ್ದು ಮಾತ್ರ ನಿಜಕ್ಕೂ ಪ್ರೀತಿಪಾತ್ರ ಗುಣ' ಎಂದು ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಭಾರತ vs ಆಸ್ಟ್ರೇಲಿಯಾ ಮುಖಾಮುಖಿಯ ಈ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ವೇಳೆ ಬೌಂಡರಿ ಲೈನ್ ಸಮೀಪ ಸ್ಮಿತ್ ಫೀಲ್ಡಿಂಗ್ ಮಾಡುತ್ತಿದ್ದರು. ಅಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಪ್ರೇಕ್ಷಕರಿದ್ದ ಗುಂಪು ಸ್ಮಿತ್ ನತ್ತ ಬೊಟ್ಟು ಮಾಡಿ, 'ಚೀಟರ್ ಚೀಟರ್' ಎಂದು ಕೂಗಿ ಗೇಲಿ ಮಾಡಿತ್ತು.
ಆಗ ಕ್ರೀಸ್ ಬಿಟ್ಟು ಆ ಭಾರತೀಯ ಪ್ರೇಕ್ಷಕರಿದ್ದೆಡೆಗೆ ಬಂದಿದ್ದ ಕೊಹ್ಲಿ, ಸ್ಮಿತ್ ಅವರನ್ನು ಅವಮಾನಿಸಬೇಡಿ. ಬದಲಿಗೆ ಅವರ ಫೀಲ್ಡಿಂಗ್ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ಕೋರಿಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ದೇಶದ ಪ್ರೇಕ್ಷಕರ ನಿರ್ಭಾವುಕ ಮನಸ್ಥಿತಿಗಾಗಿ ಸ್ಮಿತ್ ಅವರಲ್ಲಿ ಕೊಹ್ಲಿ ಕ್ಷಮೆಯೂ ಯಾಚಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಈ ಪಂದ್ಯದಲ್ಲಿ ಭಾರತ 39 ರನ್ ಗೆಲುವನ್ನಾಚರಿಸಿತ್ತು.