ಜುಲೈ 2 ಮಂಗಳವಾರ, 17 ವರ್ಷಗಳ ಬಳಿಕ ಭಾರತ ತಂಡವು ಟಿ20 ವಿಶ್ವಕಪ್ 2024ರಲ್ಲಿ ಪ್ರಶಸ್ತಿ ಗೆದ್ದ ಸಂತೋಷದಲ್ಲಿದೆ. ಈ ಸಂಭ್ರಮಾಚರಣೆ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ರೋಹಿತ್ ನಿವೃತ್ತಿಯ ನಂತರ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್ನಲ್ಲಿ ನಾಯಕತ್ವವನ್ನು ಎದುರು ನೋಡುತ್ತಿದೆ. ಇದಕ್ಕಾಗಿ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ, ಇನ್ನೂ ಮೂವರು ಆಟಗಾರರು ನಾಯಕನ ರೇಸ್ನಲ್ಲಿದ್ದಾರೆ. ಹೀಗಾಗಿ ಈ ಆಟಗಾರರ ಅಂಕಿ-ಅಂಶಗಳ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಶುಭಮನ್ ಗಿಲ್ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾಗೆ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. ಜಿಂಬಾಬ್ವೆ ಪ್ರವಾಸದ ತಂಡದ ನಾಯಕತ್ವವನ್ನು ಗಿಲ್ ಅವರಿಗೆ ವಹಿಸಲಾಗಿದೆ.
ಐಪಿಎಲ್ 2024ರಲ್ಲಿ, ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ನಾಯಕತ್ವವನ್ನು ವಹಿಸಿದ್ದರು, ಇದರಲ್ಲಿ 12 ಪಂದ್ಯಗಳಲ್ಲಿ ತಂಡವು 7 ಪಂದ್ಯಗಳಲ್ಲಿ ಸೋಲು ಮತ್ತು 5 ಪಂದ್ಯಗಳನ್ನು ಗೆದ್ದಿತ್ತು.
ಟಿ20 ವಿಶ್ವಕಪ್ 2024ರ ತಂಡಕ್ಕೆ ಶುಭಮನ್ ಗಿಲ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ತಂಡದಲ್ಲಿ ಆಡುವ ಅವಕಾಶವನ್ನು ಗಿಲ್ ಕಳೆದುಕೊಂಡಿದ್ದರು. ಆದರೆ, ಇದೀಗ ಜಿಂಬಾಬ್ವೆ ಸರಣಿಯಲ್ಲಿ ನಾಯಕನಾಗಿ ಶುಭಮನ್ ಗಿಲ್ಗೆ ಯಶಸ್ಸು ಕಾಣಲು ಗೋಲ್ಡನ್ ಅವಕಾಶವಿದೆ.

ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸದ್ಯ ಟೀಮ್ ಇಂಡಿಯಾಕ್ಕೆ ಟಿ20 ಕ್ರಿಕೆಟ್ನಲ್ಲಿ ಪಾಂಡ್ಯ ಉಪನಾಯಕನಾಗಿದ್ದಾರೆ.
ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್ ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು 16 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ ಟೀಮ್ ಇಂಡಿಯಾ 10 ಪಂದ್ಯಗಳನ್ನು ಗೆದ್ದಿದ್ದರೆ, 5ರಲ್ಲಿ ಸೋಲನ್ನು ಕಂಡಿದೆ. ಈ ಎಲ್ಲಾ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಹಾರ್ದಿಕ್ ಪ್ರದರ್ಶನದ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಯುವ ಬ್ಯಾಟರ್ ಮತ್ತು ವಿಕೆಟ್ಕೀಪರ್ ರಿಷಬ್ ಪಂತ್ ಕೂಡ ನಾಯಕನ ರೇಸ್ನಲ್ಲಿದ್ದಾರೆ. ಪಂತ್ಗೆ ಐಪಿಎಲ್ನಲ್ಲಿ ಉತ್ತಮ ನಾಯಕತ್ವದ ಅನುಭವವಿದೆ.
ತಮ್ಮ ನಾಯಕತ್ವದ ಮೂಲಕ ಎಲ್ಲರ ಗಮನ ಸೆಳೆದಿರುವ ಪಂತ್ ಈಗಾಗಲೇ ಟಿ20 ಯಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದಾರೆ. ಯುವ ವಿಕೆಟ್ ಕೀಪರ್ ನಾಯಕತ್ವದಲ್ಲಿ ಭಾರತ 5 ಟಿ20 ಪಂದ್ಯಗಳನ್ನು ಆಡಿದ್ದು ಅದರಲ್ಲಿ 2 ಪಂದ್ಯ ಗೆದ್ದು 2ರಲ್ಲಿ ಸೋತಿದೆ.

ಟಿ20 ಕ್ರಿಕೆಟ್ನಲ್ಲಿ ಹೊಸ ಅಲೆ ಎಬ್ಬಿಸಿರುವ ಟೀಮ್ ಇಂಡಿಯಾ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ನಾಯಕನಾಗುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 7 ಟಿ20 ಪಂದ್ಯಗಳಲ್ಲಿ ಸೂರ್ಯ ಅವರಿಗೆ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿರುವ ಅನುಭವಿದೆ.
ಸೂರ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ 7 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ಪಂದ್ಯಗಳನ್ನು ಗೆದ್ದು ಎರಡು ಬಾರಿ ಸೋಲನ್ನು ಎದುರಿಸಿದೆ. ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಸೂರ್ಯ ಹಿಡಿದ ಅದ್ಭುತ ಕ್ಯಾಚ್ನಿಂದ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯ ಕೂಡ ನಾಯಕನ ರೇಸ್ನಲ್ಲಿ ಉಳಿದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರು ಕೂಡ ನಾಯಕತ್ವಕ್ಕೆ ಸ್ಥಾನಕ್ಕೆ ಕೇಳಿ ಬರುತ್ತಿದೆ. ಬುಮ್ರಾ ಆವರಿಗೂ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿರುವ ಅನುಭವಿದೆ.
ಬುಮ್ರಾ ಅವರ ನಾಯಕತ್ವದಲ್ಲಿ ಭಾರತ 2 ಟಿ20 ಪಂದ್ಯಗಳನ್ನು ಆಡಿದ್ದು, ಎರಡನ್ನೂ ಗೆದ್ದಿದೆ. ಟಿ20 ವಿಶ್ವಕಪ್ 2024ರಲ್ಲಿ ಹಾರ್ದಿಕ್, ಸೂರ್ಯ, ಪಂತ್ ಮತ್ತು ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜುಲೈ 20ರ ಮೊದಲು ಹೊಸ ನಾಯಕನನ್ನು ಬಿಸಿಸಿಐ ಘೋಷಿಸಲಿದೆ.