
ಹೊಸದಿಲ್ಲಿ, ಜುಲೈ 14: ಹನ್ನೆರಡನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದು ಆರ್ಭಟಿಸಿದ್ದ ಟೀಮ್ ಇಂಡಿಯಾ, ನಾಕ್ಔಟ್ ಹಂತದಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗಿರಿಸುವ ಮೂಲಕ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿತು.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿನ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಗೌತಮ್ ಗಂಭೀರ್, ಇದೊಂದು ಕಠಿಣ ಸೋಲು. ಆದರೆ ಇಷ್ಟಕ್ಕೇ ತಂಡದ ಆಟಗಾರರ ತಲೆದಂಡವನ್ನು ಕೇಳಿದರೆ ಅದು ಮೂರ್ಖತನ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಪಂದ್ಯದಲ್ಲಿ 239 ರನ್ಗಳ ಸಾಧಾರಣ ಮೊತ್ತ ದಾಖಲಿಸಿದ ನ್ಯೂಜಿಲೆಂಡ್ ತಂಡ ತನ್ನ ಬಲಿಷ್ಠ ಬೌಲಿಂಗ್ ದಾಳಿ ಮೂಲಕ 5 ರನ್ಗೆ ಭಾರತದ 3 ವಿಕೆಟ್ ಕಿತ್ತು ಹಿಡಿತ ಕಂಡುಕೊಂಡಿತ್ತು. ಬಳಿಕ 24 ರನ್ ಗಳಿಸುವ ಹೊತ್ತಿಗೆ ದಿನೇಶ್ ಕಾರ್ತಿಕ್ ಕೂಡ ಪೆವಿಲಿಯನ್ ಸೇರಿದ್ದರು. ಬಳಿಕ ಜಡೇಜಾ (77) ಮತ್ತು ಎಂ.ಎಸ್ ಧೋನಿ (50) ಅವರ ಹೋರಾಟದಿಂದ ಚೇತರಿಸಿದ ಭಾರತ ತಂಡ ಅಂತಿಮವಾಗಿ 18 ರನ್ಗಳಿಂದ ಸೋಲುಂಡಿತು. ಧೋನಿ ಮತ್ತು ಜಡೇಜಾ 7ನೇ ವಿಕೆಟ್ಗೆ 116 ರನ್ಗಳ ಜೊತೆಯಾಟವಾಡಿದ್ದರು.
"ಭಾರತ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿದ ರೀತಿಯಿಂದ ಬೇಸರಗೊಂಡಿರುತ್ತದೆ. ಆದರೆ, ಸೋತ ಮಾತ್ರಕ್ಕೆ ಆಟಗಾರರ ತಲೆದಂಡ ಕೇಳುವುದು ಮೂರ್ಖತನ. ತಂಡದಲ್ಲಿ ಯಾವುದೇ ಬದಲಾವಣೆ ತರುವ ಅಗತ್ಯವಿಲ್ಲ. ಮುಂದಿನ ಸರಣಿಗಳಲ್ಲಿ ಕೇವಲ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವನ್ನಷ್ಟೇ ಬದಲಾಯಿಸಬೇಕು," ಎಂದು ಗಂಭೀರ್ ಹೇಳಿದ್ದಾರೆ.
"ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರ ಮೇಲೆ ವಿಶ್ವಾಸವಿರಲಿ. ಅವರಲ್ಲಿನ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಅಗತ್ಯವಿದೆ. ಆಯ್ಕೆಯಲ್ಲಿನ ಗೊಂದಲದಿಂದಾಗಿ ಈಗಾಗಲೇ ಅಂಬಾಟಿ ರಾಯುಡು ಅವರನ್ನು ಕಳೆದುಕೊಂಡಾಗಿದೆ. ಆಟಗಾರರ ವೃತ್ತಿ ಬದುಕನ್ನು ಅಂತ್ಯಗೊಳಿಸುವಂತಹ ಕೆಲಸ ಮಾಡುವುದು ಬೇಡ," ಎಂದು ಗಂಭೀರ್ ತಮ್ಮ ಮನದ ಮಾತುಗಳನ್ನು ಹೊರಹಾಕಿದ್ದಾರೆ.