ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಯೋಜನೆ ಏನಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಗಿಲ್ ಪಡೆಯನ್ನು ಸೇರಲು ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸಿದ್ಧರಾಗಿದ್ದಾರೆ. ಮತ್ತೊಂದು ಬದಲಾವಣೆಯ ಗಾಳಿ ತಂಡದಲ್ಲಿ ಬೀಸುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ನಲ್ಲಿ ನಾಯಕ ಶುಭಮನ್ ಗಿಲ್, ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಸಮಯೋಚಿತ ಪ್ರದರ್ಶನ ನೀಡಿದರು. ಪರಿಣಾಮ ಟೀಮ್ ಇಂಡಿಯಾ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತ್ತು. ಹೀಗಾಗಿ ತಂಡ ಆತ್ಮ ವಿಶ್ವಾಸದಿಂದ ಕೂಡಿದೆ. ಇದೇ ವೇಳೆ ತಂಡದಲ್ಲಿ ಬದಲಾವಣೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ಆಕಾಶ್ ದೀಪ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಕೆಟ್ ಬೇಟೆ ನಡೆಸಿದರು. ಅಲ್ಲದೆ ಇಂಗ್ಲೆಂಡ್ನಲ್ಲಿ ಚೇತನ್ ಶರ್ಮಾ ಬಳಿಕ ಒಂದೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದರು. ಇವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನು ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಮ್ಯನೇಜ್ಮೆಂಟ್ ಒಬ್ಬ ಬೌಲರ್ಗೆ ರೆಸ್ಟ್ ನೀಡಲಿದೆ.
ಒಂದು ವೇಳೆ ಒಬ್ಬ ವೇಗದ ಬೌಲರ್ನನ್ನು ತಂಡ ಕೈ ಬಿಡುವ ಪ್ಲ್ಯಾನ್ ಮಾಡಿಕೊಂಡಿದ್ದರೆ, ಪ್ರಸಿದ್ಧ್ ಕೃಷ್ಣಾಗೆ ಗೇಟ್ ಪಾಸ್ ನೀಡಲಿದೆ. ಈ ಪೇಸರ್ ಮೂರನೇ ಇನಿಂಗ್ಸ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅಲ್ಲದೆ ರನ್ಗಳಿಗೆ ಕಡಿವಾಣ ಹಾಕುವಲ್ಲಿ ಎಡವಿದ್ದರು. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಇಂಗ್ಲೆಂಡ್ ತಂಡ ಬೌನ್ಸಿ ಪಿಚ್ ನಿರ್ಮಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಇದೇ ರೀತಿ ಆದಲ್ಲಿ ಈ ಪಿಚ್ ಮೇಲೆ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ಸ್ಥಿರ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ, ವಾಷಿಂಗ್ಟನ್ ಸುಂದರ್ ತಂಡದಿಂದ ಹೊರ ಹೋಗಬಹುದಾಗಿದೆ. ಇವರ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ಗೆ ಅವಕಾಶ ಸಿಗುವ ಅವಕಾಶ ಹೆಚ್ಚಿದೆ. ಈ ಪಿಚ್ನಲ್ಲಿ ವೇಗದ ಬೌಲರ್ಗಳಿಗೆ ನೆರವು ಸಿಗಲಿದ್ದು, ಇದರ ಲಾಭವನ್ನು ಶಾರ್ದೂಲ್ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಇವರು ತಮ್ಮ ವೇಗದ ಬೌಲಿಂಗ್ನಿಂದ ವಿಕೆಟ್ ಬೇಟೆ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ.