ಭಾರತೀಯ ಕ್ರಿಕೆಟ್ನ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಅವರ ವಿರುದ್ಧ ಕಿಡಿಕಾರಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಟಗಾರರ ವೇತನದಲ್ಲಿ ಕಡಿತಗೊಳಿಸುವ ಬಗ್ಗೆ ಮಲ್ಹೋತ್ರಾ ಹೇಳಿಕೆಯನ್ನು ನೀಡಿದ್ದರು.
ಕೊರೊನಾ ವೈರಸ್ ಕಾರಣದಿಂದಾಗಿ ವಿಶ್ವಾದ್ಯಂತ ಎಲ್ಲಾ ಕ್ರೀಡೆಗಳು ಸ್ಥಗಿತವಾಗಿದೆ. ಹಾಗೆಯೇ ಕ್ರಿಕೆಟ್ಗೆ ಸಂಬಂಧಪಟ್ಟ ಯಾವುದೇ ಟೂರ್ನಿಗಳೂ ನಡೆಯುತ್ತಿಲ್ಲ. ಈ ಕಾರಣದಿಂದಾಗಿ ಕ್ರಿಕೆಟ್ ಆಟಗಾರರ ವೇತನವನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದಿದ್ದರು.
ಪತ್ರಿಕೆಯೊಂದಕ್ಕೆ ಬರೆದಿರುವ ಕಾಲಂ ನಲ್ಲಿ ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆಯ ಬಗ್ಗೆ ಸುನಿಲ್ ಗಾವಸ್ಕರ್ ಮಲ್ಹೋತ್ರಾ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐಯನ್ನು ಓಲೈಕೆ ಮಾಡಲು ಈ ರೀತಿಯ ಹೇಳಿಕೆಯನ್ನು ಮಲ್ಹೋತ್ರ ನೀಡುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ಈ ಕಾಲಂನಲ್ಲಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಅಶೋಕ್ ಮಲ್ಹೋತ್ರಾ ಇಂಡಿಯನ್ ಕ್ರಿಕೆಟರ್ಸ್ ಅಸೊಸಿಯೇಶನ್ನ ಅಧ್ಯಕ್ಷರಾಗಿದ್ದಾರೆ. ಆದರೆ ಈ ಅಸೋಸಿಯೇಶನ್ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಹಾಲಿ ಆಟಗಾರರು ಅಥವಾ ದೇಸಿ ಕ್ರಿಕೆಟಿಗರು ಸದಸ್ಯರಾಗಿರುವುದಿಲ್ಲ. ಹೀಗಾಗಿ ಕ್ರಿಕೆಟರ್ಗಳ ವೇತನದ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವೂ ಅವರಿಗಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅವರ ಈ ಪ್ರತಿಕ್ರಿಯೆಗೂ ಮುನ್ನ ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಆಟಗಾರರ ವೇತನ ಕಡಿತದ ಬಗ್ಗೆ ಯಾವುದೇ ಯೋಚನೆಯನ್ನೂ ಬಿಸಿಸಿಐ ಮಾಡಿಲ್ಲ. ನಮ್ಮ ಚಿಂತನೆಯಲ್ಲಿ ಅದು ಇಲ್ಲ ಎಂದು ಅರುಣ್ ಹೇಳಿದ್ದರು.